ಪೋಪ್ ಲಿಯೋ 14 ಅವರು ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರನ್ನು ಉಡುಪಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಅವರು ಪ್ರಸ್ತುತ ಶಿರ್ವದ ಆರೋಗ್ಯ ಮಾತಾ ದೇವಾಲಯದ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಉಡುಪಿ: ಪೋಪ್ ಲಿಯೋ 14 ಅವರು ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರನ್ನು ಉಡುಪಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಅವರು ಪ್ರಸ್ತುತ ಶಿರ್ವದ ಆರೋಗ್ಯ ಮಾತಾ ದೇವಾಲಯದ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ನೇಮಕಾತಿಯನ್ನು ಜ. 31ರಂದು ರೋಮ್ ನಲ್ಲಿ ಮಧ್ಯಾಹ್ನ 12 ಗಂಟೆಗೆ (ಭಾರತೀಯ ಸಮಯ ಸಂಜೆ 4.30ಕ್ಕೆ) ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಅದೇ ಸಮಯದಲ್ಲಿ ಉಡುಪಿ ಜಿಲ್ಲೆಯ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಪ್ರಕಟಿಸಲಾಯಿತು.ಇಲ್ಲಿನ ಉಚ್ಚಿಲ ಗ್ರಾಮದ ಲಾರೆನ್ಸ್ ಡಿಸೋಜಾ ಮತ್ತು ಸಿಸಿಲಿಯಾ ದಂಪತಿಗಳ ಪುತ್ರರಾಗಿ ಎಂಟು ಸಹೋದರ-ಸಹೋದರಿಯರ ದೊಡ್ಡ ಕುಟುಂಬಕ್ಕೆ ಸೇರಿದವರು. ಪದವಿ ಶಿಕ್ಷಣದ ನಂತರ ಮಂಗಳೂರು ಸಂತ ಜೋಸೆಫ್ ಅಂತರ-ಧರ್ಮಪ್ರಾಂತ್ಯ ಸೆಮಿನರಿಯಲ್ಲಿ ತತ್ವಶಾಸ್ತ್ರ ಅಧ್ಯಯನ, ರೋಮಿನ ಪಾಂಟಿಫಿಕಲ್ ಉರ್ಬಾನಿಯಾನಾ ವಿವಿಯಲ್ಲಿ ಧರ್ಮಶಾಸ್ತ್ರದಲ್ಲಿ ಪದವಿ, ಬೆಲ್ಜಿಯಂನ ಲುವೇನ್ನ ಕ್ಯಾಥೊಲಿಕ್ ವಿವಿಯಲ್ಲಿ ಧರ್ಮಶಾಸ್ತ್ರದಲ್ಲಿ ಲಿಸೆನ್ಸಿಯೇಟ್ ಹಾಗೂ ನೈತಿಕ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಫಾ. ಲೆಸ್ಲಿ ಅವರು 1990ರಲ್ಲಿ ಮಂಗಳೂರು ಧರ್ಮಪ್ರಾಂತ್ಯಕ್ಕೆ ಯಾಜಕರಾಗಿ ಅಭಿಷೇಕಗೊಂಡರು. ಕುಂದಾಪುರದ ಹೋಲಿ ರೋಸರಿ ಮತ್ತು ಮಂಗಳೂರಿನ ಕುಲಶೇಖರದ ಹೋಲಿ ಕ್ರಾಸ್ ದೇವಾಲಯದಲ್ಲಿ ಸಹಾಯಕ ಧರ್ಮಗುರುಗಳಾಗಿದ್ದರು. ಮಂಗಳೂರಿನ ಸಂತ ಜೋಸೆಫ್ ಅಂತರ-ಧರ್ಮಪ್ರಾಂತ್ಯ ಸೆಮಿನರಿಯಲ್ಲಿ ನೈತಿಕ ಧರ್ಮಶಾಸ್ತ್ರದ ಪ್ರಾಧ್ಯಾಪಕರಾಗಿಯೂ ಮತ್ತು ತರಬೇತಿದಾರರಾಗಿಯೂ ಸೇವೆ ಸಲ್ಲಿಸಿದ್ದಾರೆಶಂಕರಪುರದ ಸಂತ ಜಾನ್ ದಿ ಎವಾಂಜೆಲಿಸ್ಟ್ ದೇವಾಲಯದ, ಕಲ್ಯಾಣಪುರ-ಸಂತೆಕಟ್ಟೆಯ ಮೌಂಟ್ ರೋಸರಿ ದೇವಾಲಯದ ಧರ್ಮಗುರುಗಳಾಗಿ ತಮ್ಮ ಧಾರ್ಮಿಕ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. 2022ರಿಂದ ಫಾ. ಲೆಸ್ಲಿ ಅವರು ಶಿರ್ವದ ಶೋಕಮಾತಾ ದೇವಾಲಯದ ಧರ್ಮಗುರುಗಳಾಗಿ, ಡಾನ್ ಬಾಸ್ಕೋ ಹಾಗೂ ಸೈಂಟ್ ಮೇರೀಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕರಾಗಿ, ಉಡುಪಿ ಧರ್ಮಪ್ರಾಂತ್ಯದ ಆಡಳಿತ ಮತ್ತು ನಿರ್ವಹಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು 2022ರಿಂದ 2025ರವರೆಗೆ ಯಾಜಕರ ಮಂಡಳಿಯ ಕಾರ್ಯದರ್ಶಿಯಾಗಿದ್ದು, ಪ್ರಸ್ತುತ ಶಿರ್ವ ವಲಯದ ಪ್ರಧಾನ ಧರ್ಮಗುರುಗಳಾಗಿ, ಉಡುಪಿ ಧರ್ಮಪ್ರಾಂತ್ಯದ ಧಾರ್ಮಿಕ ನ್ಯಾಯಮಂಡಳಿಯ ವಕೀಲ ಹಾಗೂ ಸಲಹೆಗಾರರ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.