ಸಾರಾಂಶ
ಕನ್ನಡಪ್ರಭ ವಾರ್ತೆ ನ್ಯಾಮತಿ
ತಾನೊಬ್ಬನೇ ಬಾಳಿದರೆ ಸಾಲದು ತನ್ನೊಂದಿಗೆ ಮನುಕುಲ ಬಾಳಿ ಬದುಕುವ ಜೊತೆಗೆ ಸಮಾಜದ ಸರ್ವಾಂಗೀಣ ಪ್ರಗತಿ ಆಗಬೇಕೆಂಬ ನಿಲುವು ರೇವಣಸಿದ್ದೇಶ್ವರರು ಹೊಂದಿದ್ದರು. ಅಂತಹ ಮಹಾನ್ ವ್ಯಕ್ತಿಯ ಗದ್ದುಗೆ ಜೀರ್ಣೋದ್ಧಾರವಾಗಿರುವುದು ಬಹಳ ಸಂತೋಷ ಎಂದು ಆನಂದಪುರ ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ತಿಳಿಸಿದರು.ನ್ಯಾಮತಿ ಮರಿದೇವರ ಮಠದ ಶ್ರೀರೇವಣಸಿದ್ದೇಶ್ವರ ಗದ್ದುಗೆಯ ಗೃಹಪ್ರವೇಶ, ಪ್ರಾಣಪ್ರತಿಷ್ಠಾಪನೆ, ಶಿವದೀಕ್ಷೆ ಹಾಗೂ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ ರೇವಣಸಿದ್ದೇಶ್ವರರು ಆಚಾರ, ವಿಚಾರದಲ್ಲಿದ್ದವರು. ಇಂತಹ ಮಹಾನ್ ವ್ಯಕ್ತಿಯ ಗದ್ದುಗೆ ಬೃಹತ್ ಆಗಿ ನಿರ್ಮಿಸಿದ್ದೀರಿ ನೀವು ಆಚಾರ ವಿಚಾರ ಮೈಗೂಡಿಸಿಕೊಳ್ಳಬೇಕು. ಶ್ರೀಗಳು ಶಿವಮೊಗ್ಗದ ಎನ್.ಡಿ.ವಿ.ಹಾಸ್ಟೆಲ್ ನಿರ್ಮಿಸಲು ಸಹಕರಿಸಿದ್ದರಲ್ಲದೇ, ನ್ಯಾಮತಿ ಪಟ್ಟಣದಲ್ಲಿ ಸಂಸ್ಕೃತ ಪಾಠಶಾಲೆ ತೆರೆಯುವ ಆಶಯ ಹೊಂದಿದ್ದರು. ಪಟ್ಟಣದಲ್ಲಿರುವ ಶ್ರೀ ಮಹಾಂತೇಶ್ವರ ಮಠವು ಆನಂದಪುರ ಶ್ರೀ ಮುರುಘ ರಾಜೇಂದ್ರ ಸಂಸ್ಥಾನದ ಶಾಖಾಮಠವಾಗಿದ್ದು ಇದರ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಿಸಿದರೂ ಕೆಲವು ಅಡೆತಡೆಯಿಂದ ಅಭಿವೃದ್ಧಿ ಹೊಂದಿಲ್ಲವೆಂದು ಹೇಳಿದರು.
ಗೋಣಿಬೀಡು ಶೀಲಾ ಸಂಪಾದನ ಮಠ, ಕಾಳೇನಹಳ್ಳಿ ಶಿವಯೋಗಾಶ್ರಮದ ಶ್ರೀಸಿದ್ದಲಿಂಗ ಸ್ವಾಮೀಜಿ ಮಾತನಾಡಿ ಗೋಣಿಬೀಡು ಶೀಲಾ ಸಂಪಾದನ ಮಠಕ್ಕೂ ಮರಿದೇವರ ಮಠಕ್ಕೂ ಅನ್ಯೋನ್ಯ ಸಂಪರ್ಕ ಇದೆ. ರೇವಣಸಿದ್ದೇಶ್ವರರು ಮಹಾನ್ ಯೋಗಿಗಳು, ಹಲವು ಮಠದ ಸ್ವಾಮೀಜಿಗಳ ಸಂಪರ್ಕದಲ್ಲಿದ್ದವರು. ಆಚಾರ-ವಿಚಾರದಲ್ಲಿ ಆದರ್ಶ ವ್ಯಕ್ತಿಯಾಗಿದ್ದರು. ಸಮಾಜಕ್ಕಾಗಿ ಮಠ, ದೇವಸ್ಥಾನಗಳ ಅಭಿವೃದ್ಧಿಗಾಗಿ ಜಮೀನು, ಖಾಲಿ ನಿವೇಶನ ದಾನವಾಗಿ ನೀಡಿದ್ದಾರೆ ಎಂದು ಆಶೀರ್ವಚನ ನೀಡಿದರು.ಹೊನ್ನಾಳಿ ಹಿರೇಕಲ್ಮಠ ಒಡೆಯರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ 13 ಮಂದಿಗೆ ಶಿವದೀಕ್ಷೆ ನೀಡಿ ಮಂತ್ರೋಪದೇಶ, ಆಶೀರ್ವಚನ ನೀಡಿದರು. ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಂತ ರುದ್ರೇಶ್ವರ ಸ್ವಾಮೀಜಿ, ನ್ಯಾಮತಿ ತಾಲೂಕು ಚಿನ್ನಿಕಟ್ಟೆ ಶ್ರೀ ಗುರುರುದ್ರಸ್ವಾಮಿ ಕಲ್ಮಠದ ನಿರಂಜನ ಸ್ವಾಮೀಜಿ ಇದ್ದರು.
ಹೊನ್ನಾಳಿ ಶಾಸ್ತ್ರಿ ಹೊಳೆಮಠ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು, ಎಚ್.ಎಂ.ಶಿವರಾಜ್, ನವುಲೆ ಗಂಗಾಧರ್, ಜಿ.ಎಂ.ಮಂಜುನಾಥ, ಶಿವಮೊಗ್ಗ ಸುಜಾತ, ಗ್ರಾಮಸ್ಥರಿದ್ದರು.