ಸಾರಾಂಶ
ವಿಧಾನ ಪರಿಷತ್ : ಪ್ರಸ್ತುತ ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ನೀಡುತ್ತಿರುವ ಮೊಟ್ಟೆಯ ದರವನ್ನು ಹೆಚ್ಚಳ ಮಾಡುವ ಬಗ್ಗೆ ಪರಿಶೀಲಿಸಲಾಗುವುದು. ಈ ಬಗ್ಗೆ ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದು ನಿರ್ಧರಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಕಾಂಗ್ರೆಸ್ನ ಎಂ.ಎಲ್. ಅನಿಲ್ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಪ್ರತಿ ಮೊಟ್ಟೆಗೆ 6 ರು. ನಿಗದಿ ಮಾಡಲಾಗಿದೆ. ದರ ಹೆಚ್ಚಳ ಮಾಡಬೇಕಾದರೆ ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದರು. ಅನೇಕ ಕಡೆ 4.50 ರು.ನಿಂದ 5.50 ರು.ಗಳಿಗೆ ಮೊಟ್ಟೆ ದೊರೆಯುತ್ತದೆ. ಕೆಲವು ಸಾರಿ ದರ ಹೆಚ್ಚಳವಾಗಿರಬಹುದು ಎಂದರು.
ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಬೇಕಾದ ಅಡುಗೆ ಎಣ್ಣೆ, ಬೇಳೆಗಳ ಪೂರೈಕೆಗೆ ಯಾವುದೇ ಸಮಸ್ಯೆಯಾಗಿಲ್ಲ. ಹಣದ ಕೊರತೆ ಸಹ ಆಗಿಲ್ಲ. ಮಧ್ಯಾಹ್ನ ಉಪಾಹಾರ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿರುವುದರಿಂದ ಕೇಂದ್ರದ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಎಂ.ಎಲ್. ಅನಿಲ್ಕುಮಾರ್, ಮಧ್ಯಾಹ್ನದ ಉಪಾಹಾರಕ್ಕೆ ನಿತ್ಯ ಅಡುಗೆ ಎಣ್ಣೆ, ಬೇಳೆಗಳು ಬೇಕು. ಆದರೆ ಎರಡು ತಿಂಗಳಾದರೂ ಅಡುಗೆ ಎಣ್ಣೆ, ಬೇಳೆಗಳ ಪೂರೈಕೆ ಆಗುತ್ತಿಲ್ಲ. ಶಿಕ್ಷಕರೇ ಕೈಯಿಂದ ಖರೀದಿಸುವಂತಹ ಸ್ಥಿತಿ ಇದೆ. ಅದೇ ರೀತಿ ಮೊಟ್ಟೆಯನ್ನು ಐದು ರು.ಗೆ ಖರೀದಿಸಿ, ಬೇಯಿಸಲು, ಸಾಗಾಟ ಇತ್ಯಾದಿ ವೆಚ್ಚವೆಂದು ಹೆಚ್ಚುವರಿಯಾಗಿ ಒಂದು ರು. ನೀಡುತ್ತಿದೆ. ಆದರೆ ಸದ್ಯ ಎಲ್ಲಿಯೂ 5 ರು.ಗಳಿಗೆ ಮೊಟ್ಟೆ ಸಿಗುವುದಿಲ್ಲ, ಹಾಗಾಗಿ ದರ ಪರಿಷ್ಕರಿಸಬೇಕು, ಅಡುಗೆಯವರಿಗೆ ಹಾಗೂ ಸಹಾಯಕರಿಗೆ ನೀಡುವ ಗೌರವ ಧನವನ್ನು ಜಾಸ್ತಿ ಮಾಡಬೇಕು ಎಂದು ಆಗ್ರಹಿಸಿದರು.