ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಚಿನ್ನದ ವ್ಯಾಪಾರಿಯ ದರೋಡೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಭಾವಚಿತ್ರಗಳನ್ನು ಬಿಡುಗಡೆ ಮಾಡಿರುವ ಪೊಲೀಸರು, ತಲೆಮರೆಸಿಕೊಂಡ ಆರೋಪಿಗಳ ಸುಳಿವು ನೀಡುವವರಿಗೆ ಬಹುಮಾನ ಘೋಷಿಸಿದ್ದಾರೆ.

ಮಂಗಳೂರು: ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಚಿನ್ನದ ವ್ಯಾಪಾರಿಯ ದರೋಡೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಭಾವಚಿತ್ರಗಳನ್ನು ಬಿಡುಗಡೆ ಮಾಡಿರುವ ಪೊಲೀಸರು, ತಲೆಮರೆಸಿಕೊಂಡ ಆರೋಪಿಗಳ ಸುಳಿವು ನೀಡುವವರಿಗೆ ಬಹುಮಾನ ಘೋಷಿಸಿದ್ದಾರೆ.

ದರೋಡೆಕೋರರಿಗೆ ಸಹಾಯ ಮಾಡಿದ ಆರೋಪದ ಮೇಲೆ ಮೂವರನ್ನು ಪಣಂಬೂರು ಪೊಲೀಸರು ಕೆಲವು ದಿನಗಳ ಹಿಂದೆ ಬಂಧಿಸಿದ್ದರು. ಕೇರಳದ ನಿಮಿಲ್‌ ಮತ್ತು ಮಡಿಕೇರಿ ಮೂಲದ ಇರ್ಷಾದ್‌ ಹಾಗೂ ಮುಸ್ತಫಾ ಬಂಧಿತರು.ಪ್ರಕರಣದಲ್ಲಿ ಒಟ್ಟು 14 ಮಂದಿ ಆರೋಪಿಗಳು ನೇರವಾಗಿ ಭಾಗಿಯಾಗಿದ್ದು, ಇಬ್ಬರು ಆರೋಪಿಗಳು ಕೃತ್ಯಕ್ಕೆ ಸಹಕರಿಸಿದ ಆರೋಪಿಗಳಿಗೆ ಆಶ್ರಯ ನೀಡಿದ ಬಗ್ಗೆ ಪೊಲೀಸರು ತನಿಖೆಯಲ್ಲಿ ಪತ್ತೆ ಹಚ್ಚಿದ್ದರು. ಇದೀಗ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಒಟ್ಟು 13 ಮಂದಿಯ ವಿಳಾಸ ಸಹಿತ ವಿವರಗಳಲ್ಲಿ 9 ಮಂದಿಯ ಭಾವಚಿತ್ರಗಳನ್ನು ಬಿಡುಗಡೆ ಮಾಡಿ, ಇವರ ಮಾಹಿತಿಯನ್ನು ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಮಾಹಿತಿ ನೀಡಿದವರ ಗುರುತು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ. ಆರೋಪಿಗಳಲ್ಲಿ ಹೆಚ್ಚಿನವರು ಕೇರಳದವರಾಗಿದ್ದು, ಜೊತೆಗೆ ಕೊಡಗು, ಬೆಂಗಳೂರಿನ ಕೆಲವರು ಭಾಗಿಯಾಗಿದ್ದಾರೆ. ಆರೋಪಿಗಳ ಭಾವಚಿತ್ರಗಳಿರುವ ಪೋಸ್ಟರ್‌ಗಳನ್ನು ಕರ್ನಾಟಕ ಮತ್ತು ಕೇರಳದಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಯುತ್ತಿದೆ. ಆರೋಪಿಗಳ ಸುಳಿವು ಕಂಡುಬಂದಲ್ಲಿ ತಕ್ಷಣ ಪೊಲೀಸ್‌ ಇಲಾಖೆ ಅಥವಾ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.ತಲೆಮರೆಸಿಕೊಂಡ ಆರೋಪಿಗಳಿವರು !: ಪಾಂಡಿಚೇರಿಯ ಶಿಜಿನ್‌ ಗಂಗಾಧರನ್‌, ಕೇರಳದ ಪಾಲೊಟ್ಟು ಕಾವಿಲ್‌ನ ಶ್ರೀರಾಗ್‌, ಕಣ್ಣೂರು ಅಂಜರಕಂಡಿಯ ಅತುಲ್‌, ಕಣ್ಣೂರು ಎತಕ್ಕಾಡ್‌ನ ಮಿಥುನ್‌ ಲಾಲ್‌, ಪಜಯಂಗಡಿ ಮಟ್ಟೂಲ್‌ನ ಅಜೀರ್‌ ತರಾಯಿಲ್‌ ಪೀಡಿಕಯಿಲ್‌, ಅಂಜರಕಂಡಿಯ ವೈಶಾಕ್‌, ಕಣ್ಣೂರಿನ ಅಸೀರ್‌ ಪಯ್ಯನ್ನೂರು, ಕೇರಳದ ಪ್ರಣವ್‌, ಕಣ್ಣೂರಿನ ಅಂಜರಕಂಡಿಯ ವಿಜಿಲ್‌, ಕೊಡಗು ಪೊನ್ನಂಪೇಟೆಯ ಉಬೈದ್‌ ಎಂಎನ್‌ ಅಲಿಯಾಸ್‌ ಉಬ್ಬಿ, ಮಡಿಕೇರಿಯ ಫಿರೋಜ್‌ ಮೊಯ್ದು ಅಬ್ಬಾಸ್‌, ಪೊನ್ನಂಪೇಟೆಯ ಜಿಯಾದ್‌ ಮತ್ತು ಪೊನ್ನಂಪೇಟೆಯ ಜಮೀರ್‌ ಅಲಿರಾ ತಲೆಮರೆಸಿಕೊಂಡಿರುವ ಆರೋಪಿಗಳು.