ನಶಾಮುಕ್ತ ಭಾರತ ಅಂತ ಹೇಳಿ ಕೇಂದ್ರ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾಕಷ್ಟು ಕಾರ್ಯಕ್ರಮ ಮಾಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಮದ್ಯಪಾನ, ಧೂಮಪಾನ ಸಹಿತ ಇತರೆ ದುಶ್ಚಟಗಳಿಂದ ದೂರ ಇರಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ದಿನೇ ದಿನೇ ಎಚ್ಐವಿ ರೋಗದಿಂದ ಸಾಯುತ್ತಿರುವ ಯುವಜನರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಆತಂಕ ವ್ಯಕ್ತಪಡಿಸಿದರು.

ನಗರದ ಮಹಾವೀರ ವೃತ್ತದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕ ಆಶ್ರಯದಲ್ಲಿ ಶಿವಗಂಗಾ ಸಾಂಸ್ಕೃತಿಕ ಯುವ ಕಲಾ ಸಂಘ ಜಾನಪದ ಕಲಾತಂಡಗಳ ಮೂಲಕ ನಡೆದ ಎಚ್ಐವಿ, ಏಡ್ಸ್ ಕುರಿತ ಬೀದಿ ನಾಟಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಹಿಂದೆ ಹಿರಿಯರು ಪೌರಾಣಿಕ ನಾಟಕಗಳ ಪಾತ್ರದ ಮೂಲಕ ಬರುವ ಎಲ್ಲಾ ವಿಡಂಬನೆ ಅರ್ಥ ಮಾಡಿಕೊಂಡು ತಮ್ಮ ದಿನಚರಿಯನ್ನು ಒಂದು ಸಾತ್ವಿಕ ನೆಲೆಗಟ್ಟಿನಲ್ಲಿ ಆರೋಗ್ಯಕರ ಬದುಕು ಸಾಗಿಸತ್ತಿದ್ದರು. ಇಂದು ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಇಡೀ ಪ್ರಪಂಚವನ್ನು ತಮ್ಮ ಮೊಬೈಲ್‌ನಿಂದಲೇ ನೋಡುವ ಅವಕಾಶ ಕೈಯಲ್ಲಿ ಇದ್ದರೂ ಯುವ ಸಮುದಾಯ ಮಾರಕ ರೋಗಕ್ಕೆ ತುತ್ತಾಗುತ್ತಿರುವುದು ಆತಂಕದ ವಿಷಯ ಎಂದರು.

ನಶಾಮುಕ್ತ ಭಾರತ ಅಂತ ಹೇಳಿ ಕೇಂದ್ರ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾಕಷ್ಟು ಕಾರ್ಯಕ್ರಮ ಮಾಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಮದ್ಯಪಾನ, ಧೂಮಪಾನ ಸಹಿತ ಇತರೆ ದುಶ್ಚಟಗಳಿಂದ ದೂರ ಇರಬೇಕು ಎಂದರು.

ಮಾರಕ ಎಚ್ಐವಿ ಕಾಯಿಲೆ ಬಗ್ಗೆ ಜಾಗೃತಿ ಅಗತ್ಯ. ಪ್ರತಿಯೊಬ್ಬರು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಮನಸ್ಸು ಮಾಡಿ ಸಾಂಕ್ರಾಮಿಕ ರೋಗ ತಡೆಗಟ್ಟಲು ಸನ್ನದ್ಧರಾಗಬೇಕು ಎಂದರು.

ಶಿವಗಂಗಾ ಸಾಂಸ್ಕೃತಿಕ ಯುವ ಕಲಾ ಸಂಘದ ಅಧ್ಯಕ್ಷ ಸಂತೆ ಕಸಲಗೆರೆ ಬಸವರಾಜು ಮಾತನಾಡಿ, ಎಚ್ಐವಿ/ಏಡ್ಸ್ ಬಗ್ಗೆ ಮಾಹಿತಿ ಪಡೆಯಲು ಈಗ ಮೊಬಲೈಸೇಶನ್ ಫಾರ್ ಏಡ್ಸ್ ಸುರಕ್ಷ ಅಭಿಯಾನ 2026 ಮೂಲಕ ಸಾರ್ವಜನಿಕರು ತಮ್ಮ ಮೊಬೈಲ್ ನ ಕ್ಯೂಆರ್ ಕೋಡ್ ಮಾಡುವ ಮೂಲಕ ಅರೋಗ್ಯ ಸ್ಥಿತಿಗತಿ ತಿಳಿದುಕೊಳ್ಳಬಹುದು ಎಂದರು.

ಈ ವೇಳೆ ಐಸಿಟಿಸಿ ಆಪ್ತ ಸಮಾಲೋಚಕ ಶಿವಕುಮಾರ್, ಯುವ ಮುಖಂಡ ಹರೀಶ್ ಬಾಣಸವಾಡಿ, ಕಲಾವಿದರಾದ ರಾಜಣ್ಣ, ಎಸ್.ಶಿವರಾಜ್, ಹನಿಯಂಬಾಡಿ ಶೇಖರ್, ರಾಜಣ್ಣ, ಎಸ್.ಪಿ.ನವೀನ ಕುಮಾರಿ, ಸಿದ್ದಪ್ಪ ಇತರರು ಇದ್ದರು.