ಕನ್ನಡಪ್ರಭ ವಾರ್ತೆ ಬೆಂಗಳೂರು
ಮಳೆ ಬಂದಾಗ ನೀರು ತುಂಬಿಕೊಂಡಾಗ ಅಂಡರ್ಪಾಸ್ನಲ್ಲಿ ಸಂಚಾರ ಮಾಡದಂತೆ ಎಚ್ಚರಿಸಲು ನೀರಿನ ಮಟ್ಟ ನಮೂದಿಸುವ ಮಾರ್ಕಿಂಗ್ ಮಾಡುವ ಪ್ರಕ್ರಿಯೆಯನ್ನು ಉತ್ತರ ನಗರ ಪಾಲಿಕೆ ಆರಂಭಿಸಿದೆ. ಯಲಹಂಕದ ನ್ಯಾಯಾಂಗ ಬಡಾವಣೆಯ ರೈಲ್ವೆ ಅಂಡರ್ಪಾಸ್ನಲ್ಲಿ ಮಳೆ ಬಂದಾಗಲೆಲ್ಲ ನೀರು ನಿಲ್ಲುತ್ತದೆ. ಈ ವೇಳೆ ವಾಹನ ಹಾಗೂ ಜನರ ಸಂಚಾರ ಅಪಾಯಕಾರಿ. ಆದರೆ, ಕೆಲವೊಮ್ಮೆ ವಾಹನ ಸವಾರರು ನೀರಿನಲ್ಲಿ ಸಾಗುತ್ತಾರೆ. ಕೆಲವೊಮ್ಮೆ ಎಂಜಿನ್ ಆಫ್ ಆಗಿ ನೀರಿನಲ್ಲಿ ಸಿಕ್ಕಿ ಬೀಳುತ್ತಾರೆ. ಇದರಿಂದ ಸಂಭವಿಸಬಹುದಾದ ಅಪಾಯ ತಪ್ಪಿಸಲು ಅಂಡರ್ಪಾಸ್ನಲ್ಲಿ 1, 2, 3 ಮತ್ತು 4 ಅಡಿ ಎಂದು ಕೆಂಪು ಬಣ್ಣದಲ್ಲಿ ಮಾರ್ಕಿಂಗ್ ಮಾಡಲಾಗಿದೆ.2 ಅಡಿ ಮಾರ್ಕಿಂಗ್ ಪಕ್ಕದಲ್ಲಿ ಅಪಾಯ ಎಂದು ಬರೆಯಲಾಗಿದೆ. ‘ನೀರಿನ ಮಟ್ಟ ನಿಗದಿತ ಎತ್ತರಕ್ಕೆ ತಲುಪಿದಾಗ ಸಂಚಾರಕ್ಕೆ ಯೋಗ್ಯವಲ್ಲ’ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ತಾತ್ಕಾಲಿಕ ಕ್ರಮ: ಅಂಡರ್ಪಾಸ್ನಲ್ಲಿನೀರು ನಿಂತಾಗ ಓಡಾಡಬೇಡಿ ಎನ್ನುವುದು ತಾತ್ಕಾಲಿಕ ಕ್ರಮವಾಗಿದೆ. ಇದಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಮಳೆ ಬಂದಾಗ ನೀರು ನಿಲ್ಲದಂತೆ ಪರಿಹಾರ ಕ್ರಮ ಕೈಗೊಂಡರೇ ವಾಹನಗಳ ಸಂಚಾರ ಸುಗಮವಾಗಿರುತ್ತದೆ. ಅಪಾಯವೂ ಇರುವುದಿಲ್ಲ. ಆದರೆ, ಶಾಶ್ವತ ಕ್ರಮದ ಬದಲು ತಾತ್ಕಾಲಿಕ ಕ್ರಮ ಅನುಸರಿಸುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.