ಮಂಗಳೂರು: ನಗರದ ಮುಖ್ಯ ರಸ್ತೆಯಾಗಿರುವ ಪಂಪ್‌ವೆಲ್ ಸರ್ಕಲ್‌ನಿಂದ ಕರಾವಳಿ ಜಂಕ್ಷನ್‌ವರೆಗಿನ ಚತುಷ್ಪಥ ರಸ್ತೆ ಅಭಿವೃದ್ದಿ ಕಾಮಗಾರಿ ಲೋಕೋಪಯೋಗಿ ಇಲಾಖೆ ವತಿಯಿಂದ ಫೆ.15ರಿಂದ ಜೂ.15ರವರೆಗೆ 4 ತಿಂಗಳ ಕಾಲ ನಡೆಯಲಿದ್ದು, ಸೂಕ್ತ ಸಂಚಾರ ಬದಲಾವಣೆ ಮಾಡಿ ಮಂಗಳೂರು ನಗರ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಪಂಪ್‌ವೆಲ್ ವೃತ್ತದಿಂದ ಕಂಕನಾಡಿ ಹಳೆ ರಸ್ತೆ - ಕಂಕನಾಡಿ ಜಂಕ್ಷನ್‌ಗೆ (ಮಂಗಳೂರು ನಗರಕ್ಕೆ ಒಳಬರುವ ರಸ್ತೆ) ಮತ್ತು ಕರಾವಳಿ ಜಂಕ್ಷನ್‌ನಿಂದ ಪಂಪ್‌ವೆಲ್ ವೃತ್ತದವರೆಗಿನ (ಮಂಗಳೂರು ನಗರದಿಂದ ಹೊರ ಹೋಗುವ ರಸ್ತೆ) ಬೈಪಾಸ್ ರಸ್ತೆಗಳನ್ನು ತಾತ್ಕಾಲಿಕವಾಗಿ ಏಕಮುಖ ರಸ್ತೆಗಳನ್ನಾಗಿ ಮಾರ್ಪಾಡು ಮಾಡಲಾಗಿದ್ದು, ಈ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಲಿದ್ದು, ಸಾರ್ವಜನಿಕರು ಬದಲಿ ರಸ್ತೆಯನ್ನು ಉಪಯೋಗಿಸಬಹುದು.ಪಂಪ್‌ವೆಲ್ ಜಂಕ್ಷನ್‌ನಿಂದ ಕರಾವಳಿ ಜಂಕ್ಷನ್‌ಗೆ ಹೋಗುವ ವಾಹನಗಳನ್ನು ನಿರ್ಬಂಧಿಸಿ, ಕಂಕನಾಡಿ ಹಳೆ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ತಲಪಾಡಿ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರಕ್ಕೆ ಪ್ರವೇಶಿಸುವ ಎಲ್ಲ ವಾಹನಗಳು ಪರ್ಯಾಯ ರಸ್ತೆಯಾದ ಮಹಾಕಾಳಿಪಡ್ಪು, ಮಾರ್ಗನ್ಸ್ ಗೇಟ್, ಕೋಟಿಚೆನ್ನಯ ಸರ್ಕಲ್ ಅಥವಾ ಮಂಗಳಾದೇವಿ ಮುಖಾಂತರ ಸಂಚರಿಸಬಹುದು.ಬಿ.ಸಿ. ರೋಡ್ ಕಡೆಯಿಂದ ಬರುವ ಭಾರಿ ವಾಹನಗಳು, ಇತರ ವಾಹನಗಳು ಮತ್ತು ಲಾಲ್‌ಬಾಗ್ ಬಸ್ಸು ನಿಲ್ದಾಣಕ್ಕೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸುಗಳು ಪಡೀಲ್ ಜಂಕ್ಷನ್‌ನಿಂದ ನಂತೂರು ಕಡೆಗೆ ಹಾಗೂ ಕೇರಳ- ಕಾಸರಗೋಡು ಕಡೆಯಿಂದ ಕರಾವಳಿ ಕಡೆಗೆ ಬರುವ ಭಾರಿ ವಾಹನಗಳು ಮತ್ತು ಕೆಎಸ್ಸಾರ್ಟಿಸಿ ಬಸ್ಸುಗಳು ಪಂಪ್‌ವೆಲ್ ಜಂಕ್ಷನ್‌ನಿಂದ ನಂತೂರು ಕಡೆಗೆ ಸಂಚರಿಸುವುದು.

ಮಂಗಳೂರು ನಗರದ ಒಳಭಾಗದಿಂದ ಕರಾವಳಿ ಜಂಕ್ಷನ್ ಕಡೆಯಿಂದ ಪಂಪ್‌ವೆಲ್ ಕಡೆಗೆ ಸಂಚರಿಸುವ ವಾಹನಗಳು ಯಥವಾತ್ತಾಗಿ ಸಂಚರಿಸುವುದು.ಕಂಕನಾಡಿ ಜಂಕ್ಷನ್- ಪಂಪುವೆಲ್ ರಸ್ತೆ (ಕಂಕನಾಡಿ ಓಲ್ಡ್ ರಸ್ತೆ), ಕರಾವಳಿ- ಕಂಕನಾಡಿ ರಸ್ತೆ, ಕಂಕನಾಡಿ- ಫಳ್ನೀರ್ ಹೈಲ್ಯಾಂಡ್ ಆಸ್ಪತ್ರೆ ರಸ್ತೆ, ಕರಾವಳಿ- ಬಲ್ಮಠ ರಸ್ತೆ ಹಾಗೂ ಕಂಕನಾಡಿ ಬೈಪಾಸ್ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.