ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ನಿಯಮಗಳ ಕುರಿತು ಮಾಹಿತಿ ಹಂಚಿಕೊಂಡರು. ಕಲಿಕಾ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸು ವಿಧಾನ ಕುರಿತು ಪ್ರಾತ್ಯಕ್ಷಿಕವಾಗಿ ಮಾಹಿತಿ ನೀಡಲಾಯಿತು.

ಕೊಪ್ಪಳ: ರಸ್ತೆಯ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಅಗತ್ಯವಾಗಿದೆ. ಸಂಚಾರ ನಿಯಮ ಪಾಲಿಸಲು ಮೊದಲು ಅವುಗಳ ಮಾಹಿತಿ ನಮಗೆ ಇರಬೇಕಾಗುತ್ತದೆ. ಇದರಿಂದ ಅಪಘಾತಗಳಿಂದ ಪಾರಾಗಲು, ತಡೆಯಲು ಸಾಧ್ಯವಾಗುತ್ತದೆ ಎಂದು ಎಸ್ಪಿ ಯಶೋದಾ ವಂಟಿಗೋಡಿ ಹೇಳಿದರು.

ನಗರದ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಘಟಕ, ಜಿಲ್ಲಾ ಪೊಲೀಸ್ ಆಡಳಿತ ಹಾಗೂ ಜಿಲ್ಲಾ ಸಾರಿಗೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ರಸ್ತೆ ಸುರಕ್ಷತಾ ಮಾಸಿಕ ಜನವರಿ 2024’ ಕುರಿತು ಭಿತ್ತಿಪತ್ರಗಳ ಬಿಡುಗಡೆ ಸಮಾರಂಭ ಹಾಗೂ ಕಲಿಕಾ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸುವ ಕುರಿತು ಪ್ರಾತ್ಯಕ್ಷಿಕೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಯಾರಿ ಕುರಿತಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಸರಿಯಾದ ಬಳಕೆ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮಿಕಾಂತ ಬಿ. ನಾಲ್ವರ್ ಮಾತನಾಡಿ, ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ನಿಯಮಗಳ ಕುರಿತು ಮಾಹಿತಿ ಹಂಚಿಕೊಂಡರು. ಕಲಿಕಾ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸು ವಿಧಾನ ಕುರಿತು ಪ್ರಾತ್ಯಕ್ಷಿಕವಾಗಿ ಮಾಹಿತಿ ನೀಡಲಾಯಿತು.

ಹಿರಿಯ ಮೋಟಾರ್ ವಾಹನಗಳ ನಿರೀಕ್ಷಕರಾದ ಬಿ.ಪಿ. ಕೃಷ್ಣೇಗೌಡ ಮತ್ತು ಜಿ.ಎನ್. ಸುರೇಶ, ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಚೆನ್ನಬಸವ ಎ., ಮಹಾವಿದ್ಯಾಲಯದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಘಟಕದ ಸಂಯೋಜಕ ಪ್ರವೀಣ ಹಾದಿಮನಿ ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಕಾವೇರಿ ಕಿಲಾರಿ ನಿರೂಪಿಸಿದರು. ಕವಿತಾ ಪ್ರಾರ್ಥಿಸಿದರು, ಡಾ.ಪ್ರಶಾಂತ ಕೊಂಕಲ್ ಸ್ವಾಗತಿಸಿದರು. ಪ್ರವೀಣ ಹಾದಿಮನಿ ವಂದಿಸಿದರು.