ತಾಲೂಕಿನೆಲ್ಲೆಡೆ ರೋಹಿಣಿ ಮಳೆ ಅವಾಂತರ

| Published : Jun 06 2024, 12:30 AM IST

ಸಾರಾಂಶ

ಚಳ್ಳಕೆರೆ ತಾಲೂಕಿನ ಗರ‍್ಲಕಟ್ಟೆ ಬಳಿ ರಭಸದಿಂದ ಹರಿಯುತ್ತಿದ್ದ ಹಳ್ಳದ ನೀರಿನಲ್ಲೇ ವಾಹನ ಮತ್ತು ಬೈಕ್ ಸವಾರರು ಓಡಾಟ ನಡೆಸಿದರು.

ಮನೆಗಳು ಬಿದ್ದು ಲಕ್ಷಾಂತರ ರು. ನಷ್ಟ : 42.08 ಎಂಎಂ ಮಳೆ ದಾಖಲೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನಾದ್ಯಂತ ರೋಹಿಣಿ ಮಳೆ ನಿರಂತರವಾಗಿ ಮುಂದುವರೆದಿದ್ದು, ಮಳೆಯಿಂದ ಗುಡುಗು, ಸಿಡಿಲ ಜೊತೆಗೆ ಮನೆ, ಬೆಳೆ ಹಾನಿಯಾದ ಘಟನೆಗಳು ನಡೆದಿವೆ.

ತಾಲೂಕಿನಾದ್ಯಂತ ಮಂಗಳವಾರ ರಾತ್ರಿ 42.08 ಎಂ.ಎಂ ಮಳೆಯಾಗಿದ್ದು, ಇಲ್ಲಿಯವರೆಗೆ ಸುಮಾರು 800 ಎಂ.ಎಂ ಮಳೆ ದಾಖಲಾಗಿದೆ.

ಚಳ್ಳಕೆರೆ-20 ಎಂ.ಎಂ, ತಳಕು-18.08, ನಾಯಕನಹಟ್ಟಿ-1.02, ದೇವರಮರಿಕುಂಟೆಯಲ್ಲಿ-4.02 ಮಳೆ ದಾಖಲಾಗಿದೆ.

ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ದೇವಮ್ಮ ಮತ್ತು ನಿಂಗಮ್ಮ ಎಂಬುವವರ ಮನೆಗಳು ಮಳೆಯಿಂದ ಕುಸಿದು ಬಿದ್ದು ಸುಮಾರು ₹1 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಸರವಾಳ-ಓಬಳಾಪುರದ ಜಾಫರ್‌ಸಾಭ್ ಎಂಬುವವರ ಮನೆ ಬಿದ್ದು ಸುಮಾರು ₹50 ಸಾವಿರ ಹಾನಿಯಾಗಿದೆ.

ಚಳ್ಳಕೆರೆ-ನನ್ನಿವಾಳ ಸಂಪರ್ಕ ಕಲ್ಪಿಸುವ ಗರ‍್ಲಕಟ್ಟೆ ಬಳಿ ಮಳೆಯಿಂದ ನದಿಯಂತೆ ಹಳ್ಳದ ನೀರು ರಭಸದಿಂದ ಹರಿದ ಪರಿಣಾಮ ಕೆಲಹೊತ್ತು ವಾಹನ ಸಂಚಾರ ಸ್ಥಗಿತವಾಗಿತ್ತು. ನಗರದ ಚಿತ್ರದುರ್ಗ ರಸ್ತೆಯ ಬಿಇಒ ಕಚೇರಿ ಎದುರಿನಲ್ಲಿ ಬಿಎಂಜಿಎಚ್‌ಎಸ್ ಹಾಗೂ ಎಚ್‌ಟಿಟಿ ಶಾಲೆಯ ಮೂಲಕ ಹರಿದ ನೀರು ನದಿಯೋಪಾದಿಯಲ್ಲಿ ರಸ್ತೆಯಲ್ಲೇ ನಿಂತು ಸಣ್ಣವ್ಯಾಪಾರಿಗಳಿಗೆ ಸಮಸ್ಯೆ ಉಂಟಾಗಿದ್ದು, ನಿಂತ ನೀರಲ್ಲೇ ವ್ಯಾಪಾರ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು.