ಸಾರಾಂಶ
- ಸರ್ಕಾರ ಹಣ ಮಂಜೂರು ಮಾಡಿದ್ದು, ವರ್ಷದೊಳಗೆ ಕಾಮಗಾರಿ ಮುಗಿಸಿ: ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೂಚನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು, 400 ಹಾಸಿಗೆ ಸಾಮರ್ಥ್ಯದ ಹೊಸ ಬ್ಲಾಕ್ ನಿರ್ಮಾಣ ಮಾಡಲು ₹260 ಕೋಟಿಗೆ ಸರ್ಕಾರ ಮಂಜೂರಾತಿ ನೀಡಿದೆ. ಆದಷ್ಟು ಬೇಗ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲಾ ಆಸ್ಪತ್ರೆಗೆ ಕ್ರಿಟಿಕಲ್ ಕೇರ್ ಸೆಂಟರ್ ಸ್ಥಾಪಿಸಲು ₹16.6 ಕೋಟಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಎಲ್ಲ ಚಿಕಿತ್ಸೆ ಮತ್ತು ಪರೀಕ್ಷಾ ಸೌಲಭ್ಯಗಳು ಒಂದೇ ಬ್ಲಾಕ್ನಲ್ಲಿ ಸಿಗುವಂತಾಗಲಿದೆ. ನೂತನ ಬ್ಲಾಕ್ನ್ನು ವರ್ಷದಲ್ಲಿ ಪೂರ್ಣಗೊಳಿಸುವುದರ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಚಿಕಿತ್ಸೆಗೆ ಸಹಕಾರಿ ಆಗಬೇಕೆಂದರು.
ಮರಿಯಮ್ಮನಹಳ್ಳಿ- ಶಿವಮೊಗ್ಗ ರಸ್ತೆಯಲ್ಲಿ ಬರುವ ಹರಿಹರ, ಮಲೇಬೆನ್ನೂರು, ಹೊನ್ನಾಳಿ ಭಾಗದಲ್ಲಿ ಸಾಕಷ್ಟು ಗುಂಡಿಗಳು ಇವೆ. ಆದ್ದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿರುವ ಬಗ್ಗೆ ದೂರುಗಳು ಇವೆ. ಇದನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಆದಷ್ಟು ಬೇಗ ಡಿಪಿಆರ್ ತಯಾರಿಸಿ ಯೋಜನೆ ಸಿದ್ಧಪಡಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಲೋಕೋಪಯೋಗಿ ಇಲಾಖೆಯವರು ಕೆಲವು ಕಾಮಗಾರಿಗಳನ್ನು ಟೆಂಡರ್ ಕರೆದಿಲ್ಲ. ಕೆಲವು ಕಾಮಗಾರಿಗಳನ್ನೇ ಆರಂಭಿಸಿಲ್ಲ. ಆದಷ್ಟು ಬೇಗನೆ ಕಾಮಗಾರಿ ಪ್ರಾರಂಭಿಸಬೇಕು. ಕೆಆರ್ಡಿಎಲ್, ಪಿಆರ್ಇಡಿ, ನಿರ್ಮಿತಿ ಕೇಂದ್ರ ಸೇರಿದಂತೆ ಸಿವಿಲ್ ಕಾಮಗಾರಿ ವಿಭಾಗದವರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ಮರಳು ಬ್ಲಾಕ್ ಪಾರದರ್ಶಕ ಹರಾಜು:ಮರಳು ನೀತಿ 2020ರ ಅನ್ವಯ ಹರಿಹರ, ಹೊನ್ನಾಳಿ ಹಾಗೂ ನ್ಯಾಮತಿ ಭಾಗದಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿ ಗುರುತಿಸಲಾದ ಮರಳು ಬ್ಲಾಕ್ಗಳನ್ನು ಅತ್ಯಂತ ಪಾರದರ್ಶಕವಾಗಿ ಹರಾಜು ಪ್ರಕ್ರಿಯೆ ನಡೆಸಲು ಸೂಚನೆ ನೀಡಲಾಗಿದೆ. ಈ ವೇಳೆ ಶಾಸಕರಾದ ಡಿ.ಜಿ.ಶಾಂತನಗೌಡ ಮಾತನಾಡಿ, ಮರಳು ಸಮಸ್ಯೆ ಹೆಚ್ಚಿರುವುದರಿಂದ ಆದಷ್ಟು ಬೇಗೆ ಟೆಂಡರ್ ಅಂತಿಮಗೊಳಿಸಲು ತಿಳಿಸಿದರು. ಆಗ ಹರಿಹರ ಶಾಸಕ ಬಿ.ಪಿ. ಹರೀಶ್ ದನಿಗೂಡಿಸಿ, ಈಗ ಮಳೆಗಾಲ ಆರಂಭವಾಗಿದೆ. ಮರಳು ಎತ್ತಲು ಸಾಧ್ಯವಾಗದ ಪರಿಸ್ಥಿತಿ ಇದೆ. ಆದ್ದರಿಂದ ಡಿಸೆಂಬರ್ ನಂತರದಲ್ಲಿ ನದಿಯಲ್ಲಿ ಮರಳು ಎತ್ತುವಳಿ ಮಾಡಲು ಟೆಂಡರ್ದಾರರು ಬರುವರು ಎಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ತುಂಗಭದ್ರಾ ನದಿಪಾತ್ರದಲ್ಲಿ 24 ಮರಳು ಬ್ಲಾಕ್ಗಳನ್ನು ಗುರುತಿಸಿ ಇದರಲ್ಲಿ 4 ಬ್ಲಾಕ್ಗಳನ್ನು ಸರ್ಕಾರಿ ಕಾಮಗಾರಿಗಳಿಗಾಗಿ ಮೀಸಲಿರಿಸಲಾಗಿದೆ. ಉಳಿದ 20 ಬ್ಲಾಕ್ಗಳಿಗೆ ಟೆಂಡರ್ ಕರೆದು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು.ಕೆರೆ ತುಂಬಿಸಲು ಸೂಚನೆ:
ಈಗಾಗಲೇ ಜಗಳೂರು ಮತ್ತು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗಳು ಮುಕ್ತಾಯವಾಗಿವೆ. ಜಗಳೂರು ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಲು ಪ್ರಾರಂಭಿಸಬೇಕು. ಆದರೆ, ಇನ್ನೂ ಏಕೆ ವಿಳಂಬ ಮಾಡಲಾಗುತ್ತಿದೆ ಎಂದು ಸಚಿವರು ಜಲಸಂಪನ್ಮೂಲ ಅಧಿಕಾರಿಗಳಿಗೆ ಪ್ರಶ್ನಿಸಿದರು. ಆಗ ಅಧಿಕಾರಿಗಳು ಪ್ಯಾನಲ್ಗಳನ್ನು ಅಳವಡಿಸಲಾಗುತ್ತಿದ್ದು, ಜುಲೈನಿಂದ ಪ್ರಾರಂಭಿಸಲಾಗುತ್ತದೆ ಎಂದರು. ಬಳಿಕ ಸಚಿವರು ಕೆರೆಗೆ ನೀರು ತುಂಬಿಸುವ ಯೋಜನೆಗೆ ಪೈಪ್ ಅಳವಡಿಕೆಗೆ ₹18 ಕೋಟಿಗೆ ಟೆಂಡರ್ ಮತ್ತು ₹75 ಕೋಟಿ ಕಾಮಗಾರಿಗೆ ಆದಷ್ಟು ಬೇಗ ಟೆಂಡರ್ ಕರೆಯಲು ಸೂಚನೆ ನೀಡಿದರು.ಸಭೆಯಲ್ಲಿ ಶಾಸಕರಾದ ಬಿ.ದೇವೇಂದ್ರಪ್ಪ, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಾಮನೂರು ಬಸವರಾಜು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
- - --13ಕೆಡಿವಿಜಿ40, 41, 42:
ದಾವಣಗೆರೆಯ ಜಿಪಂ ಸಭಾಂಗಣದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.