ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷರ ಕಬಡ್ಡಿ ಪಂದ್ಯಾವಳಿಗೆ ಚಾಲನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಬಡ್ಡಿ, ಖೋಖೋ ಹಾಗೂ ವಾಲಿಬಾಲ್ ಗ್ರಾಮೀಣ ಸೊಗಡಿನ ಅ ಮೂಲ್ಯವಾದ ಕ್ರೀಡೆಗಳು. ಇವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಆಟಗಾರರು ಮತ್ತು ದೈಹಿಕ ಶಿಕ್ಷಕರ ಮೇಲಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಶುಕ್ರವಾರ ಕಾಲೇಜು ಶಿಕ್ಷಣ ಇಲಾಖೆ, ಕುವೆಂಪು ವಿಶ್ವವಿದ್ಯಾಲಯ, ಐಡಿಎಸ್ಜಿ ಸರ್ಕಾರಿ ಕಾಲೇಜು, ನ್ಯಾಕ್ನಿಂದ ಎ ಗ್ರೇಡ್ ಸಹಯೋಗದಲ್ಲಿ ಆಯೋಜಿಸಿದ್ಧ 2025-26ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ. ಇದನ್ನು ಮರುಸೃಷ್ಟಿಸುವ ಕಾಯಕ ದೈಹಿಕ ಶಿಕ್ಷಕರು ಮಾಡಬೇಕು. ಕ್ರಿಕೇಟ್ ಮತ್ತು ಟೆನ್ನಿಸ್ ಬಾಲ್ ಪಂದ್ಯಾವಳಿ ಉಳ್ಳವರ ಆಟವಾದರೆ, ಕಬಡ್ಡಿ ಹಳ್ಳಿಜನರ ಮನರಂಜಿಸುವ ಜತೆಗೆ ದೈಹಿಕವಾಗಿ ಗಟ್ಟಿಗೊಳಿಸುವ ಆಟವಾಗಿದೆ ಎಂದು ತಿಳಿಸಿದರು.ಅನೇಕ ವರ್ಷಗಳಿಂದ ಸರ್ಕಾರಿ ಶಾಲಾ-ಕಾಲೇಜುಗಳ ಕ್ರೀಡಾಪಟುಗಳಿಗೆ ಸೂಕ್ತ ಸೌಲಭ್ಯ ಲಭ್ಯವಾಗುತ್ತಿರಲಿಲ್ಲ. ಮಣ್ಣಿನ ನೆಲದಲ್ಲೇ ಅಭ್ಯಾಸಿಸಿ, ಆಟವಾಡಬೇಕಿತ್ತು. ಇದೀಗ ಸರ್ಕಾರ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಸಾಕಷ್ಟು ಸೌಲಭ್ಯ ಕಲ್ಪಿಸಿದ್ದು ಕ್ರೀಡಾಪಟುಗಳು ಸಮರ್ಪಕವಾಗಿ ಬಳಸಿಕೊಂಡು ಸ್ಪರ್ಧೆಯಲ್ಲಿ ಭಾಗ ವಹಿಸಬೇಕು ಎಂದು ಸಲಹೆ ಮಾಡಿದರು.
ಶಿಕ್ಷಣದ ಜತೆಗೆ ಕ್ರೀಡಾಕೂಟಗಳು ವಿದ್ಯಾರ್ಥಿಗಳ ಬದುಕು ಹಸನಗೊಳಿಸಲಿದೆ. ಶಿಕ್ಷಕರು ಯುವಕರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ಕೆ ಒತ್ತು ನೀಡಬೇಕು. ಆಟದಲ್ಲೂ ಯುವಕರು ಉತ್ತಮ ಭಾಗವಹಿಸುವಿಕೆ, ಶಕ್ತಿ ಪ್ರದರ್ಶನ ಹಾಗೂ ಚಾಕ್ಯತೆಯ ಗುಣಗಳನ್ನು ಮೈಗೂಡಿಸಿಕೊಂಡು ಮುನ್ನೆಡೆದರೆ ವಿಜಯ ಸಾಧಿಸಬಹುದು ಎಂದು ತಿಳಿಸಿದರು.
ಭವ್ಯ ಭಾರತದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗದೇ ಪಾಲಕರು ಮತ್ತು ಶಿಕ್ಷಕರ ಶ್ರಮಕ್ಕೆ ಹೆಜ್ಜೆ ಹಾಕಬೇಕು. ಪ್ರಸ್ತುತ ಶಾಲಾ-ಕಾಲೇಜುಗಳ ಸಮೀಪ ಮಾದಕದ್ರವ್ಯಗಳ ಮಾರಾಟಗಾರರು ಕಂಡು ಬಂದಲ್ಲಿ ಮಾರಾಟ ಗಾರರು ಹಾಗೂ ಖರೀದಿಸುವ ಇಬ್ಬರಿಗೂ ಕಾನೂನಿನ ಪ್ರಕಾರ ಶಿಕ್ಷಾರ್ಹಕ್ಕೆ ಒಳ ಪಡಿಸಲಾಗುವುದು ಎಂದರು.
ಕಾಲೇಜಿನ ವಯಸ್ಸು ಅತ್ಯಂತ ಚಂಚಲತೆಯಿಂದ ಕೂಡಿರುತ್ತದೆ. ಈ ವಯಸ್ಸಿನಲ್ಲಿ ಹಾದಿತಪ್ಪದೇ ನಿಗದಿತ ಗುರಿಯತ್ತ ಸಾಗ ಬೇಕು. ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಅನೇಕ ಖಾಸಗೀ ಕಂಪನಿಗಳಲ್ಲಿ ನೌಕರಿ ಪಡೆಯುವ ಅವಕಾಶವಿದ್ದು ಹೆತ್ತವರಿಗೆ ಸಂಸ್ಕಾರವಂತರಾಗಿ ಬಾಳುವ ಮೂಲಕ ಸಮಾಜಕ್ಕೆ ಮಾದರಿಯಾ ಗಬೇಕು ಎಂದು ತಿಳಿಸಿದರು.ಕುವೆಂಪು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎನ್.ಡಿ.ವಿರೂಪಾಕ್ಷ ಮಾತನಾಡಿ ಐಡಿಎಸ್ಜಿ ಕಾಲೇಜಿಗೆ ಏಳು ದಶಕಗಳ ಪುರಾತನ ಹಿನ್ನೆಲೆಯಿದೆ. ನಾಲ್ಕು ತಲೆಮಾರಿನ ವಿದ್ಯಾರ್ಥಿಗಳು ಹವ್ಯಾಸದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಕಾಲೇಜು ಆವರಣ ಬಹಳಷ್ಟು ವಿಸ್ತೀರ್ಣವಾಗಿದೆ. ಆದರೆ ಹೆಲಿಪ್ಯಾಡ್ ನಿರ್ಮಾಣದಿಂದ ಆಟೋಟ ಚಟುವಟಿಕೆಗಳಿಗೆ ಸ್ಥಳಾ ವಕಾಶದ ಹಿನ್ನೆಡೆಯಾಗಿದೆ. ಹೀಗಾಗಿ ಶಾಸಕರು ಹೆಲಿಪ್ಯಾಡ್ನ್ನು ಬೇರೆಡೆ ಸ್ಥಳಾಂತರಿಸುವ ಮೂಲಕ ಕ್ರೀಡಾಪಟುಗಳಿಗೆ ಒಳಾಂಗಣ ಕ್ರೀಡಾಂಗಣ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.ಕಾಲೇಜು ಪ್ರಾಂಶುಪಾಲೆ ತಸನಿಮ್ ಕೌಸರ್ ಮನಿಯಾರ್ ಮಾತನಾಡಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ ಒಳ ಗೊಂಡ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಯಲ್ಲಿ ಸುಮಾರು 29 ತಂಡಗಳು ಭಾಗವಹಿಸಿವೆ ಎಂದು ತಿಳಿಸಿದರು.
ಇದೇ ವೇಳೆ ಮಾಣಿಕ್ಯಧಾರ ವಾರ್ಷಿಕ ಸಂಚಿಕೆಯನ್ನು ಶಾಸಕರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಐಡಿಎಸ್ಜಿ ಸರ್ಕಾರಿ ಕಾಲೇಜು ದೈಹಿಕ ಶಿಕ್ಷಕ ಕೆ.ಸಿ.ಕುಮಾರಸ್ವಾಮಿ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಸುಮಂತ್, ರಾಜಶೇಖರ್, ಆದಿಲ್, ಕ್ರೀಡಾ ಉಪಸಂಚಾಲಕ ಡಾ.ಕೆ.ಎನ್.ಲಕ್ಷ್ಮೀಕಾಂತ್, ಸಹಾಯಕ ಪ್ಯಾಧ್ಯಾಪಕಿ ನಸ್ರೀನ್ ಬಾನು ಉಪಸ್ಥಿತರಿದ್ದರು.-- ಬಾಕ್--ಕಬಡ್ಡಿ ಪಂದ್ಯಾವಳಿ ಚಾಲನೆ
ವಿದ್ಯಾರ್ಥಿ ದೆಸೆಯಲ್ಲಿ ಕಬಡ್ಡಿ ಆಟಗಾರನಾಗಿ ವಲಯಮಟ್ಟ ಪಂದ್ಯಾವಳಿಯಲ್ಲಿ ಭಾಗವಹಿಸಿದಾಗ ತಮ್ಮ ಎಡಗೈ ಗಾಯವಾಗಿ ತ್ತು ಎಂದು ಸ್ಮರಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಹೀಗಾಗಿ, ಬಲಗೈಗೆ ವಾಚ್ ಕಟ್ಟುತ್ತಿರುವುದಾಗಿ ಹೇಳಿದರು, ವಿದ್ಯಾರ್ಥಿಗಳೊಂದಿಗೆ ಕಬಡ್ಡಿ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಕ್ರೀಡಾಪಟುಗಳನ್ನು ಉತ್ತೇಜಿಸಿದರು.-- ಫೋಟೋ
ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ಧ 2025-26ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷರ ಕಬಡ್ಡಿ ಪಂದ್ಯಾವಳಿಗೆ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಿದರು.