ಸಂಸ್ಕಾರವಿದ್ದರೇ ಸಮಾಜದಲ್ಲಿ ಉತ್ತಮ ಕಾರ್ಯ

| Published : May 23 2024, 01:01 AM IST

ಸಾರಾಂಶ

ಮನುಷ್ಯನಲ್ಲಿ ಉತ್ತಮ ಸಂಸ್ಕಾರಗಳಿದ್ದರೇ ಸಮಾಜದಲ್ಲಿ ಉತ್ತಮ ಕಾರ್ಯಗಳಾಗುತ್ತವೆ. ಹಾಗಾಗಿ ಇಂದಿನ ಯುವ ಪೀಳಿಗೆಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕೂಡ ನೀಡುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಕೊಲ್ಲಾಪುರ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಮನುಷ್ಯನಲ್ಲಿ ಉತ್ತಮ ಸಂಸ್ಕಾರಗಳಿದ್ದರೇ ಸಮಾಜದಲ್ಲಿ ಉತ್ತಮ ಕಾರ್ಯಗಳಾಗುತ್ತವೆ. ಹಾಗಾಗಿ ಇಂದಿನ ಯುವ ಪೀಳಿಗೆಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕೂಡ ನೀಡುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಕೊಲ್ಲಾಪುರ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ನುಡಿದರು.ನಿಪ್ಪಾಣಿ ಸಮೀಪದ ಶ್ರೀಕ್ಷೇತ್ರ ಸ್ತವನಿಧಿಯಲ್ಲಿ ಶಾಸಕ ಅಭಯ ಪಾಟೀಲ ಹಾಗೂ ಅವರ ಬಂಧುಗಳಿಂದ ನೂತನವಾಗಿ ನಿರ್ಮಿಸಲಾದ ಶ್ರೀಮತಿ ಮಾಲಿನಿ ಪಾಟೀಲ ಕಲ್ಯಾಣ ಮಂಟಪ ಉದ್ಘಾಟಿಸಿ ಮಾತನಾಡಿದ ಅವರು, ಅಭಯ ಪಾಟೀಲ ಹಾಗೂ ಅವರ ಸಹೋದರರಿಗೆ ಅವರ ತಂದೆ-ತಾಯಿ ಉತ್ತಮ ಸಂಸ್ಕಾರ ನೀಡಿದ್ದಾರೆ. ಈ ಸಂಸ್ಕಾರದ ಪರಿಣಾಮದಿಂದಲೇ ಇಂದು ಪಾಟೀಲ ಸಹೋದರರು ತಮ್ಮ ಮಾತೋಶ್ರೀ ಸ್ಮರಣಾರ್ಥ ಮಹಾರಾಷ್ಟ್ರದ ಇಬ್ರಾಹಿಂಪೂರದಲ್ಲಿ ಯಾತ್ರಿ ನಿವಾಸ, ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಕಲ್ಯಾಣ ಮಂಟಪ ಹಾಗೂ ಇದೀಗ ಶ್ರೀಕ್ಷೇತ್ರ ಸ್ತವನಿಧಿಯಲ್ಲಿ ಕಲ್ಯಾಣ ಮಂಟಪಗಳನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಣೆ ಮಾಡಿದ್ದಾರೆ. ಇಂತಹ ಕಾರ್ಯಗಳಿಗೆ ತಂದೆ-ತಾಯಿ ಮತ್ತು ಗುರುಗಳ ಆಶೀರ್ವಾದ ಸದಾ ಇರಬೇಕಾಗುತ್ತದೆ. ಆಗ ಮಾತ್ರ ಇಂತಹ ಸಮಾಜಮುಖಿ ಕಾರ್ಯಗಳು ನಡೆಯುತ್ತವೆ ಎಂದು ಶ್ಲಾಘಿಸಿದರು.ಸಮಾರಂಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ, ಕಲ್ಲಪ್ಪಣ್ಣ ಮಗೆನ್ನವರ, ಮೋಹನ ಶಹಾ ಹಾಗೂ ಜೈನ ಸಮಾಜದ ಯುವ ಧುರೀಣ ಉತ್ತಮ ಪಾಟೀಲ ಮಾತನಾಡಿ, ಅಭಯ ಪಾಟೀಲ ಮತ್ತು ಅವರ ಸಹೋದರರು ಸಮಾಜಕ್ಕೆ ಒಂದು ಉತ್ತಮ ಕಾರ್ಯ ಮಾಡಿದ್ದಾರೆ. ಇಂತಹ ಕಾರ್ಯಗಳು ಬೇರೆಯವರಿಗೂ ಪ್ರೇರಣೆ ನೀಡುತ್ತವೆ. ಕುಟುಂಬ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಸಂದೇಶವನ್ನು ನೀಡುವ ಕಾರ್ಯವನ್ನು ಪಾಟೀಲ ಸಹೋದರರು ಮಾಡಿದ್ದಾರೆ. ಅವರ ಈ ಕಾರ್ಯ ನಮಗೆಲ್ಲರಿಗೂ ಹಾಗೂ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಹಿರಿಯ ವಕೀಲ ರವಿರಾಜ ಪಾಟೀಲ ಮಾತನಾಡಿ, ಕಳೆದ 25 ವರ್ಷಗಳಿಂದ ಪಾಟೀಲ ಮನೆತನದೊಂದಿಗೆ ಒಡನಾಟ ಹೊಂದಿದ್ದು, ಈ ಕುಟುಂಬ ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿದ್ದೇನೆ. ಇಂದು ಪಾಟೀಲ ಮನೆತನ ನಮ್ಮ ಜೈನ ಸಮಾಜಕ್ಕೆ ಹೆಮ್ಮೆಯ ಮನೆತನವಾಗಿದೆ ಎಂದು ಬಣ್ಣಿಸಿದರು.ಶಾಸಕ ಅಭಯ ಪಾಟೀಲ ಮಾತನಾಡಿ, ಚಿಕ್ಕಂದಿನಿಂದಲೂ ನಮ್ಮ ಪಾಲಕರು ನಮಗೆ ಒಳ್ಳೆಯದನ್ನು ಕಲಿಸಿಕೊಟ್ಟಿದ್ದಾರೆ. ಧರ್ಮ, ಸಮಾಜದ ಬಗ್ಗೆ ತಿಳಿವಳಿಕೆ ನೀಡಿದ್ದಾರೆ. ಅವರ ಆಶೀರ್ವಾದ ಹಾಗೂ ಅವರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಇಂದು ಮುನ್ನಡೆಯುತ್ತಿದ್ದೇವೆ. ನಮ್ಮ ಪಾಲಕರ ಆಶೀರ್ವಾದವೇ ನಮಗೆಲ್ಲ ಪ್ರೇರಣೆಯಾಗಿದೆ ಎಂದರು.ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ವಾಸ್ತುಶಾಸ್ತ್ರಜ್ಞ ಬಾಹುಬಲಿ ಗಡಕರಿ ಹಾಗೂ ಆಚಾರ್ಯ ರತ್ನ ದೇಶಭೂಷಣ ದಿಗಂಬರ ಜೈನ ವಿದ್ಯಾಪೀಠದ ಅತಿಶಯ ಕ್ಷೇತ್ರ ಸ್ತವನಿಧಿ ಆಡಳಿತ ಮಂಡಳಿಯ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.