ಅಂಗಾಂಗ ದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ: ಎನ್.ಎಸ್.ಮಂಜುನಾಥ

| Published : May 24 2024, 12:46 AM IST

ಅಂಗಾಂಗ ದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ: ಎನ್.ಎಸ್.ಮಂಜುನಾಥ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿಶ್ವ ರೆಡ್‌ಕ್ರಾಸ್ ದಿನಾಚರಣೆಗೆ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎಂ.ವೀರೇಶ್ ಚಾಲನೆ ನೀಡಿ, ಜೀವನ ಸಾರ್ಥಕತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ರಕ್ತದಾನ ಮತ್ತು ಅಂಗಾಂಗಗಳ ದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.

ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ರೆಡ್ ಕ್ರಾಸ್ ದಿನದ ಅಂಗವಾಗಿ ದಾವಣಗೆರೆ ವಿಶ್ವವಿದ್ಯಾನಿಲಯ, ಬಾಪೂಜಿ ಸಮೂಹ ಸಂಸ್ಥೆಗಳು ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹದಿಹರೆಯದ ಕಾಲಘಟ್ಟದಲ್ಲಿ ದೈಹಿಕ ಮಾನಸಿಕ ಸಾಮಾಜಿಕ ಬದಲಾವಣೆಯಾಗುವುದು ಸಹಜ. ಇಂತಹ ಸಮಯದಲ್ಲಿ ಮನಸ್ಸು ಹಿಡಿತದಲ್ಲಿಟ್ಟುಕೊಂಡು ಜೀವನ ಸಾರ್ಥಕತೆ ಮಾಡಿಕೊಳ್ಳಬೇಕು. ವೆಬ್‍ಸೈಟ್‍ನಲ್ಲಿ ಹೆಸರು ನೋಂದಾಯಿಸಿ ನಾವು ಸತ್ತ ಮೇಲೂ ಬದುಕಿರಬೇಕಾದರೆ ಅಂಗಾಂಗ ದಾನ ಮಾಡಬೇಕು ಮತ್ತು ರಕ್ತದಾನ ಮಾಡುವುದರ ಮುಖಾಂತರ ಇನ್ನೊಬ್ಬರ ಜೀವ ಉಳಿಸಬೇಕು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, 10 ರಿಂದ 19 ವರ್ಷದ ಹದಿಹರೆಯದ ವಯಸ್ಸಿನಲ್ಲಿ ಸ್ನೇಹಿತರ ಒತ್ತಡ, ಕುತೂಹಲ, ಗೆಳೆಯರಲ್ಲಿ ಒಂದಾಗಬೇಕೆಂಬ ಭಾವನೆ, ಮನೆಯ ವಾತಾವರಣ, ಇವುಗಳು ಹೆಚ್ಚು ಪ್ರಭಾವ ಬೀರುತ್ತಿದ್ದು, ಇಂತಹ ಸಮಯದಲ್ಲಿ ಮಧ್ಯಪಾನ, ಧೂಮಪಾನದಂಥ ದುಶ್ಚಟಗಳ ದಾಸರಾಗುತ್ತಾರೆ. ತಾತ್ಕಾಲಿಕವಾಗಿ ಉಲ್ಲಾಸ, ಮೋಜಿಗಾಗಿ ಪ್ರಾರಂಭಿಸಿದ ಧೂಮಪಾನದ ದುಶ್ಚಟ ಗಂಭೀರ ಸ್ವರೂಪದ ಅನಾರೋಗ್ಯಕ್ಕೆ ಈಡು ಮಾಡುತ್ತಿದೆ. ಕ್ಷಯ, ಹೃದಯಬಡಿತ ಹೆಚ್ಚಿಸುತ್ತೆ. ರಕ್ತದೊತ್ತಡ, ಅಲ್ಸರ್, ಮೆದುಳು ನಿಷ್ಕ್ರಿಯೆಯಾಗಿ ಮಾನಸಿಕ ಬೌದ್ಧಿಕ ಬೆಳವಣಿಗೆ ಕುಂಠಿತವಾಗುತ್ತದೆ. ನರ ದೌರ್ಬಲ್ಯ, ಬಿಪಿ ಏರುಪೇರಾಗಿ ಹೃದಯಾಘಾತ, ಕ್ಯಾನ್ಸರ್, ದಂತಕ್ಷಯ ಉಂಟಾಗುತ್ತದೆ ಎಂದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ, ಆರೋಗ್ಯ ಶಿಕ್ಷಣ ನಿಂತ ನೀರಾಗದೆ, ಹರಿಯುವ ನೀರಾಗಬೇಕು. ಆರೋಗ್ಯದ ಅರಿವು ಪ್ರತಿಯೊಬ್ಬರಿಗೂ ಬೇಕು. ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು. ಆರೋಗ್ಯ ಶಿಕ್ಷಣದ ಪಾಠ ಕಲಿತ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತ ದೇಶ ಕಟ್ಟಲು ಸಹಕರಿಸಬೇಕು ಎಂದರು.

ಪ್ರಾಂಶುಪಾಲ ಎಂ.ಆರ್.ಜಯಲಕ್ಷ್ಮಿ ಮಾತನಾಡಿ, ಪ್ರೀತಿ ವಿಶ್ವಾಸದಿಂದ ಪ್ರತಿಯೊಂದು ಸಾಧನೆ ಮಾಡಬಹುದು. ನಕ್ಕಷ್ಟು ಆರೋಗ್ಯ ವೃದ್ಧಿ ಆಗುತ್ತೆ, ಸಂತಸ ದಿಂದ ಕಲಿತ ವಿದ್ಯೆ ಸಮೃದ್ಧಿಯತ್ತ ತಲುಪುತ್ತೆ ಎಂದರು.

ಉಪ ಪ್ರಾಚಾರ್ಯರಾದ ಎಚ್.ಎನ್.ಶಿವಕುಮಾರ್, ಉಪನ್ಯಾಸಕ ಜಿ ಹನುಮಂತರೆಡ್ಡಿ, ಓ ಎಂ ಮಂಜುನಾಥ್, ಎಸ್.ಮಂಜಪ್ಪ. ಗೀತಾ ಟಿ.ವೈ. ಇದ್ದರು.