ರಾಷ್ಟ್ರ ಮಟ್ಟದ ವಿಜ್ಞಾನ ಸ್ಪರ್ಧೆಗೆ ಎಸ್‍ಬಿಆರ್‌ ವಿದ್ಯಾರ್ಥಿಗಳು

| Published : Feb 01 2024, 02:08 AM IST

ರಾಷ್ಟ್ರ ಮಟ್ಟದ ವಿಜ್ಞಾನ ಸ್ಪರ್ಧೆಗೆ ಎಸ್‍ಬಿಆರ್‌ ವಿದ್ಯಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

“ಜಂಕ್ ಫುಡ್ ಹುಡುಗಿಯರನ್ನು ವಿಶೇಷವಾಗಿ ಹದಿಹರೆಯದವರಲ್ಲಿ ಹೇಗೆ ಬಾಧಿಸುತ್ತದೆ” ಹಾಗೂ “ಮಲ್ಟಿಟಾಸ್ಕರ್ ವಾಟರ್ ಹಯಸಿಂತ್-ಮಾಲಿನ್ಯಕ್ಕೆ ಪರಿಹಾರ” ವಿನೂತನ ಯೋಜನೆಯೊಂದಿಗೆ ಸೀನಿಯರ್‌ ಹಾಗೂ ಜೂನಿಯರ್‌ ವಿಭಾಗದಲ್ಲಿ ರಾಷ್ಟ್ರಮಟ್ಟದ ವಿಜ್ಞಾನ ಸ್ಪರ್ಧೆಗೆ ಆಯ್ಕೆಯಾಗಿರುವ ಶರಣಬಸವೇಶ್ವರ ವಸತಿ ಪಬ್ಲಿಕ್‌ ಶಾಲೆಯ ದ್ಯಾರ್ಥಿಗಳು.

ಕನ್ನಡಪ್ರಭ ವಾರ್ತೆ ಕಲಬುರಗಿ

ಶರಣಬಸವೇಶ್ವರ ವಸತಿ ಪಬ್ಲಿಕ್ (ಎಸ್‍ಬಿಆರ್) ಶಾಲೆಯ ಇಬ್ಬರು ವಿದ್ಯಾರ್ಥಿಗಳು ತಮ್ಮ ವಿನೂತನ ವಿಜ್ಞಾನ ಪ್ರಾಜೆಕ್ಟ್‌ಗಳೊಂದಿಗೆ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್‍ನ ಅಂಗವಾಗಿ ಆಯೋಜಿಸಲಾದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ.

ಏಪ್ರಿಲ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 30 ವಿದ್ಯಾರ್ಥಿಗಳು ತಮ್ಮ ವಿಜ್ಞಾನದ ಪ್ರಾಜೆಕ್ಟ್‌ಗಳನ್ನು ಪ್ರಸ್ತುತ ಪಡಿಸಲಿದ್ದಾರೆ. 30 ಮಂದಿಯಲ್ಲಿ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅಂತಿಮ ಸ್ಪರ್ಧೆಯ ಸ್ಥಳ ಮತ್ತು ಅಂತಿಮ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಶಾಲೆಯ ಪ್ರಾಚಾರ್ಯ ಎನ್.ಎಸ್.ದೇವರಕಲ್ ತಿಳಿಸಿದ್ದಾರೆ.

ಶಿಕ್ಷಕಿ ಪೂಜಾ ಪಾಟೀಲ್ ಮಾರ್ಗದರ್ಶನದಲ್ಲಿ, ಟೀಮ್ ಲೀಡರ್ ಆಗಿರುವ ಭವಾನಿ ಎಸ್ ಅಷ್ಟಗಿ ಮತ್ತು ಭೂಮಿಕಾ ಎಂ ಬೆಳ್ಳೆ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿ “ಜಂಕ್ ಫುಡ್ ಹುಡುಗಿಯರನ್ನು ವಿಶೇಷವಾಗಿ ಹದಿಹರೆಯದವರಲ್ಲಿ ಹೇಗೆ ಬಾಧಿಸುತ್ತದೆ” ಎಂಬ ಪ್ರಾಜೆಕ್ಟ್‍ನೊಂದಿಗೆ ಜೂನಿಯರ್ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ.

ಶಿಕ್ಷಕಿ ಅಶ್ವಿನಿ ಚವ್ಹಾಣ್ ಮಾರ್ಗದರ್ಶನದಲ್ಲಿ ತಂಡದ ನಾಯಕಿ ಆಯೇಷ್ ತಹರೀಮ್ , ಅತಿಖಾ ತಸ್ನೀಮ್ ತಮ್ಮ ವಿನೂತನ ಯೋಜನೆಯಾದ “ಮಲ್ಟಿಟಾಸ್ಕರ್ ವಾಟರ್ ಹಯಸಿಂತ್-ಮಾಲಿನ್ಯಕ್ಕೆ ಪರಿಹಾರ” ಎಂಬ ವಿನೂತನ ಯೋಜನೆಯೊಂದಿಗೆ ಸೀನಿಯರ್ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ.

ವಾಟರ್ ಹಯಸಿಂತ್, ಜಲಮೂಲಗಳಲ್ಲಿ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಜಲಮೂಲಗಳಲ್ಲಿ ವಾಸಿಸುವ ಬಹುಪಾಲು ಜೀವಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಹಾಗೂ ಇದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ ಎಂದು ತಂಡದ ನಾಯಕಿ ಆಯೇಷಾ ತಹರೀಮ್ ಹೇಳಿದ್ದಾರೆ.

ವಾಟರ್ ಹಯಸಿಂತ್‍ನ್ನು ಕಾಗದ, ಪೀಠೋಪಕರಣಗಳು, ಚೀಲಗಳು, ಟೋಪಿಗಳು, ಕಾರ್ಪೆಟ್‍ಗಳು, ಹೂದಾನಿಗಳು, ಜೈವಿಕ ಅನಿಲ, ಜೈವಿಕ ಇಂಧನ, ಶಿಲೀಂಧ್ರನಾಶಕ ಔಷಧಗಳು ಹಾಗೂ ಫ್ಯೂಜನ್ ಸೀರೆಗಳನ್ನು ಉತ್ಪಾದಿಸಲು ಬಳಸಬಹುದು. ಯೋಜನೆಯ ಪ್ರಕಾರ, ಈ ನೀರಿನ ಸಸ್ಯವನ್ನು ಜಾನುವಾರುಗಳ ಆಹಾರದಲ್ಲಿ ಖಾದ್ಯ ಪೂರಕವಾಗಿ ಬಳಸಬಹುದು, ಇದು ಹಾಲುಣಿಸುವ ತಾಯಿ ಹಸುಗಳು ಮತ್ತು ಕರುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಜಂಕ್‌ ಫುಡ್‌ನಿಂದ ಆಗುವ ದೇಹಾಲಸ್ಯ: ಎಸ್‍ಬಿಆರ್ ನ 8ನೇ ತರಗತಿಯ ವಿದ್ಯಾರ್ಥಿನಿಯರಾದ ಭವಾನಿ ಮತ್ತು ಭೂಮಿಕಾ ಪ್ರಸ್ತುತಪಡಿಸಿರುವ ಯೋಜನೆಯಲ್ಲಿ ಹದಿಹರೆಯದವರು ಜಂಕ್ ಫುಡ್ ಸೇವಿಸುವುದರಿಂದ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಲಾಗಿದೆ. ದಿನಾಲೂ ಜಂಕ್ ಫುಡ್ ಸೇವಿಸುವುದರಿಂದ ಆರಂಭಿಕವಾಗಿ ಹದಿಹರೆಯದ ಸ್ತ್ರೀಯರಲ್ಲಿ ಮೊದಲ ಮುಟ್ಟಿನ ಅವಧಿಯಲ್ಲಿ ಕ್ಷಿಪ್ರ ದೇಹದ ಬೆಳವಣಿಗೆಗೆ ಹೇಗೆ ಕಾರಣವಾಗುತ್ತದೆ ಮತ್ತು ಪ್ರೌಢಾವಸ್ಥೆಯ ಆರಂಭಿಕ ಅವಧಿಯಲ್ಲಿ ಅನಿಯಮಿತ ಅವಧಿಗಳು, ಅಂಡಾಶಯದ ಕ್ಯಾನ್ಸರ್, ಹಾರ್ಮೋನ್ ಅಸಮತೋಲನ ಸೇರಿದಂತೆ ಇತರ ಅಪಾಯಕಾರಿ ಅಂಶಗಳಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಈ ಯೋಜನೆಯಲ್ಲಿ ವಿವರಿಸಲಾಗಿದೆ.

ಇದರ ಹೊರತಾಗಿ ವಿದ್ಯಾರ್ಥಿಗಳು ನಡೆಸಿದ ಅಧ್ಯಯನದ ಪ್ರಕಾರ ಜಂಕ್ ಫುಡ್ ಸೇವನೆಯ ಇತರ ಆರೋಗ್ಯ ಅಪಾಯಗಳು ಸ್ಥೂಲಕಾಯತೆ ಮತ್ತು ಅಧಿಕ ತೂಕವು ಆರಂಭಿಕ ಹದಿಹರೆಯಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಪ್ರಾಜೆಕ್ಟ್‌ನಲ್ಲಿ ಸಾರಲಾಗಿದೆ.