ಎಸ್ಸಿ, ಎಸ್ಟಿ ಮಕ್ಕಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತ

| Published : Dec 20 2024, 12:50 AM IST

ಸಾರಾಂಶ

ಎಸ್ಸಿ, ಎಸ್ಟಿ ಮಕ್ಕಳು ಹಾಸ್ಟೆಲ್ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಬಜೆಟ್‌ನಲ್ಲಿ ದೊಡ್ಡ ಗಾತ್ರದ ಹಣ ಮೀಸಲಿಟ್ಟರೂ ಸರಿಯಾಗಿ ಪ್ರಯೋಜನವಾಗುತ್ತಿಲ್ಲ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸರ್ಕಾರದ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ದಾವಣಗೆರೆ ಎಸ್ಸಿ, ಎಸ್ಟಿ ಮಕ್ಕಳು ಹಾಸ್ಟೆಲ್ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಬಜೆಟ್‌ನಲ್ಲಿ ದೊಡ್ಡ ಗಾತ್ರದ ಹಣ ಮೀಸಲಿಟ್ಟರೂ ಸರಿಯಾಗಿ ಪ್ರಯೋಜನವಾಗುತ್ತಿಲ್ಲ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸರ್ಕಾರದ ಗಮನ ಸೆಳೆದರು.ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಚ್.ಆಂಜನೇಯ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಆಗ ಎಸ್ಸಿ, ಎಸ್ಟಿ ಮಕ್ಕಳು ಯಾವುದೇ ಕಾರಣಕ್ಕೂ ಹಾಸ್ಟೆಲ್ ಸೌಲಭ್ಯಗಳಿಂದ ವಂಚಿತರಾಗಬಾರದು. ಎಷ್ಟೇ ಮಕ್ಕಳು ಬಂದರೂ ಹಾಸ್ಟೆಲ್ ಸೌಲಭ್ಯ ಕೊಡಬೇಕೆಂದು ಸಿದ್ದರಾಮಯ್ಯ ಅವರು ಎಚ್.ಆಂಜನೇಯಗೆ ಕಾಯ್ದೆ ರೂಪಿಸಿ ಎಂದು ಸೂಚಿಸಿದ್ದರು.

ಈ ಹಿನ್ನೆಲೆ ಸಮುದಾಯದ ಮಕ್ಕಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತ ಆಗಿರಲಿಲ್ಲ ಎಂದರು.ನಂತರ ಬಂದ ಸರ್ಕಾರ ಅದನ್ನು ಹಿಂಪಡೆದಿದ್ದರಿಂದ ಪ್ಯಾರಾ ಮೆಡಿಕಲ್, ಬಿಇಡಿ, ನರ್ಸಿಂಗ್, ಐಟಿಐ, ಬಿಎಸ್ಸಿ ಸೇರಿದಂತೆ ವೃತ್ತಿಪರ ಕೋರ್ಸ್‌ ಪ್ರವೇಶ ಪಡೆದ ಮಕ್ಕಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗಿ 15 ರಿಂದ 20 ಕಿ.ಮೀ. ದೂರದಿಂದ ನಗರ ಪ್ರದೇಶಕ್ಕೆ ಓಡಾಡಿ ಶಿಕ್ಷಣದಿಂದಲೇ ವಿಮುಕ್ತರಾಗುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ, ಎಸ್ಸಿ-ಎಸ್ಟಿ ಮಕ್ಕಳು ಸರ್ಕಾರಿ ಕೋಟಾದಿಂದ ಎಂಬಿಬಿಎಸ್, ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ. ಒಂದೆರಡು ವರ್ಷ ಕಳೆದ ಮೇಲೆ ಸರ್ಕಾರದಿಂದ ವಿದ್ಯಾರ್ಥಿ ವೇತನ ಬಂದಿಲ್ಲ. ನೀವು ಹಣ ಕಟ್ಟಿದರೆ ಮಾತ್ರ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡುತ್ತೇವೆ ಎಂದು ಕಾಲೇಜಿನ ಆಡಳಿತ ಮಂಡಳಿ ಎಚ್ಚರಿಸುತ್ತದೆ. ಪೋಷಕರು ಮಕ್ಕಳನ್ನು ಸ್ನಾತಕೋತ್ತರ ಪದವಿ ಓದಿಸುವುದಕ್ಕೆ ಕಷ್ಟಪಡುವಾಗ ಅವರು ಎಲ್ಲಿಂದ ಹಣ ತರಬೇಕು ಎಂದು ಪ್ರಶ್ನಿಸಿದರು. ಎಚ್.ಆಂಜನೇಯ ಅವರು ವಿಶೇಷ ಕಾನೂನು ರೂಪಿಸಿದ್ದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಈಗ ಈ ಸಮಸ್ಯೆ ಉದ್ಭವಿಸಿದೆ. ಕೂಡಲೇ ಸರ್ಕಾರ ವಿಶೇಷ ಕಾಯ್ದೆ ರೂಪಿಸಿ ಅವರಿಗೆ ವಿದ್ಯಾರ್ಥಿ ವೇತನ ನೀಡಿ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡಬೇಕು. ಎಸ್ಸಿ, ಎಸ್ಟಿ ಅಭಿವೃದ್ಧಿಗಾಗಿ ಎಸ್‌ಸಿಪಿ-ಟಿಎಸ್‌ಪಿ ಅನುದಾನದಡಿ ₹38,000 ಕೋಟಿ ಮೀಸಲಿರಿಸಲಾಗಿದೆ. ಇಷ್ಟೊಂದು ದೊಡ್ಡ ಗಾತ್ರದ ಹಣ ಮೀಸಲಿಟ್ಟರೂ ಉಪಯೋಗವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕಾ ಖರ್ಗೆ ಪ್ರತಿಕ್ರಿಯಿಸಿ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಪ್ರಸ್ತಾಪಿಸಿರುವ ವಿಷಯ ಪ್ರಸ್ತುತವಾಗಿದೆ. ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಮಕ್ಕಳು ಹಾಸ್ಟೆಲ್ ಸೌಲಭ್ಯ ಮತ್ತು ವಿದ್ಯಾರ್ಥಿ ವೇತನದಿಂದ ವಂಚಿತರಾಗದಂತೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಸಭಾಧ್ಯಕ್ಷ ಯು.ಟಿ.ಖಾದರ್ ಕೂಡ ಈ ವಿಷಯದ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಸಚಿವರಿಗೆ ಸೂಚಿಸಿದರು.