ಧಾರವಾಡ:

ವೈಜ್ಞಾನಿಕ ಸಂಶೋಧನೆಗಳಿಗೆ ತಾರ್ಕಿಕ ಅವಲೋಕನ ಮತ್ತು ಅನ್ವೇಷಣಾ ಮನೋಭಾವ ಅಗತ್ಯ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎ.ಎಚ್. ರಾಜಾಸಾಬ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ''''''''ರಾಷ್ಟ್ರೀಯ ವಿಜ್ಞಾನ ದಿನ''''''''ದ ಅಂಗವಾಗಿ ಉಪನ್ಯಾಸ ನೀಡಿದ ಅವರು, ಕೃಷಿ ಮತ್ತು ಮಣ್ಣಿನ ಗುಣಮಟ್ಟ ತಿಳಿಯಲು ಕೃಷಿ ಸಂಬಂಧಿತ ಪರಿಹಾರ ಪಡೆಯಲು ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಸ್ಯಶಾಸ್ತ್ರೀಯ ವಿಜ್ಞಾನ ಹೆಚ್ಚು ಸಹಕಾರಿಯಾಯಿತು. ಸಸ್ಯಗಳ‌ ಅಧ್ಯಯನದಲ್ಲಿ ಕ್ರಿಸ್ಪರ್ ಜೀನ್ ತಂತ್ರಜ್ಞಾನವು ಹೊಸ ಆಧುನಿಕ ತಂತ್ರಜ್ಞಾನವಾಗಿದೆ. ಗೂಗಲ್ ತಂತ್ರಜ್ಞಾನ ಗುರು ಮತ್ತು ಪುಸ್ತಕಗಳ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದರು.

ಜಗತ್ತಿನಾದ್ಯಂತ ಸಂಶೋಧನೆಗಳು ಮಾನವನ ಒಳಿತಿಗಾಗಿ ನಡೆಯುತ್ತಿವೆ. ಆದರೆ, ಆಧುನಿಕ ಅನ್ವೇಷಣೆ ಸಂಶೋಧನೆಗಳನ್ನು ವಿನಾಶಕಾರಿ ಕಾರ್ಯಕ್ಕೆ ಬಳಸುತ್ತಿರುವುದು ವಿಷಾದನೀಯ ಸಂಗತಿ ಎಂದ ಅವರು, ನದಿಗಳ ಜೋಡಣೆಯಿಂದ ಜೀವವೈವಿಧ್ಯತೆ ಸೇರಿದಂತೆ ನಾಗರಿಕತೆಗಳು ನಾಶ ಆಗಬಲ್ಲದು. ನದಿ ಜೋಡಣೆಯಿಂದ ಅನಾನುಕೂಲತೆಗಳೇ ಹೆಚ್ಚು. ಭವಿಷ್ಯದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್‌, ಅಸ್ಟ್ರೊ ಬಯೋಲಾಜಿ, ಸಿಂಥೆಟಿಕ್ ಬಯೋಲಾಜಿ, ಸೆನ್ಸರ್ ತಂತ್ರಜ್ಞಾನ, ಮತ್ತು ಮೈಕ್ರೋ ಬಯಾಲೋಜಿ ತಂತ್ರಜ್ಞಾನಗಳು ಮುನ್ನಲೆಗೆ ಬರಲಿವೆ. ಭವಿಷ್ಯದಲ್ಲಿ ಕಡಿಮೆ ಪ್ರಮಾಣ ಭೂಮಿ ಬಳಸಿಕೊಂಡು ಕೃಷಿ ಮಾಡಲಾಗುತ್ತದೆ. ಆದ್ದರಿಂದ ಪಾಲಿ‌ ಅಗ್ರಿಕಲ್ಚರಲ್ ಹೌಸ್ ಎಂಬ ಪರಿಕಲ್ಪನೆ ಮಹಾನಗರಗಳಲ್ಲಿ ಹೆಚ್ಚಾಗಿದೆ. ಕೃತಕ ಬುದ್ಧಿಮತ್ತೆ ಕೇವಲ ತಕ್ಷಣದ ಪರಿಹಾರಕ್ಕೆ ಮಾತ್ರ ಸೂಕ್ತವಾಗಿದೆ. ಆದರೆ, ಭವಿಷ್ಯದ ದೀರ್ಘಕಾಲದ ಅವಧಿಗೆ ಪುಸ್ತಕಗಳೇ ಜ್ಞಾನದ ಮೂಲಗಳಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್, ಸಂಶೋಧಕರಿಗೆ ಆಸಕ್ತಿ ಇರಬೇಕು. ಪ್ರಸ್ತುತ ಸಂಶೋಧನೆಗಳು ಸಮಾಜಮುಖಿಯಾಗಿ ಇರಬೇಕು. ಸಂಶೋಧನಾ ಮನೋಭಾವ ಬೆಳೆಸುವ ಪಠ್ಯಕ್ರಮವನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಕೃತಕ ಬುದ್ಧಿಮತ್ತೆ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಕೆ ಮಾಡಿಕೊಳ್ಳುವುದು ಒಳಿತು ಎಂದು ತಿಳಿ ಹೇಳಿದರು.


ಈ ವೇಳೆ 2023ರ ಸಾಲಿನ ವಿಜ್ಞಾನ ವಿಷಯಗಳಲ್ಲಿ ಸಸ್ಯಶಾಸ್ತ್ರ ವಿಭಾಗದ ಡಾ. ಎಸ್.ಎನ್. ಅಗಡಿ, ಪ್ರಾಣಿಶಾಸ್ತ್ರ ವಿಭಾಗದ ಡಾ. ಸಿ.ಬಿ. ಗಣೇಶ, ಗಣಕಯಂತ್ರ ವಿಭಾಗದ ಡಾ‌. ಈಶ್ವರ ಬೈದಾರಿ, ಜೈವಿಕ ರಸಾಯನಶಾಸ್ತ್ರದ ಪ್ರೊ. ಸಿ.ಎಂ.ಕಾಮನವಳ್ಳಿ ,‌ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರದ ಡಾ. ಎಸ್.ಕೆ. ರಾಜಪ್ಪ , ಡಾ. ಆರ್.ಜಿ. ಕಲಕಾಂಬ್ಕರ, ಡಾ. ಶ್ರೀನಿವಾಸ ನಾಯಕ , ಡಾ. ಲೋಕೇಶ ಶಾಸ್ತ್ರಿ, ಭೌತಶಾಸ್ತ್ರದ ಡಾ. ಎಂ.ಕೆ. ರಬಿನಾಳ, ಡಾ. ಕೆ.ಎಸ್. ಕಟಗಿ ಅವರು ₹ 10000 ನಗದು ಉತ್ತಮ ಲೇಖನಕ್ಕೆ ಪ್ರಶಸ್ತಿ ಪಡೆದರು.

2024ನೇ ಸಾಲಿನ ಉತ್ತಮ ಸಂಶೋಧನಾ ಲೇಖನಕ್ಕೆ ಪ್ರೊ. ಎಸ್. ಶಿರಾಳಶೆಟ್ಟಿ, ಡಾ. ಶ್ರೀನಿವಾಸ ನಾಯಕ ಡಾ. ವೈ. ಗಣೇಶ ಬಾಬು, ಡಾ. ಎ.ಬಿ. ವೇದಮೂರ್ತಿ ಡಾ. ಹರಿಶ್ಚಂದ್ರ ರಮಾನೆ, ಪ್ರೊ. ಜೆ.ಸಿ. ತೋನಣ್ಣವರ ಅವರಿಗೆ ಉತ್ತಮ ಸಂಶೋಧನಾ ಲೇಖನಕ್ಕೆ ₹ 10000 ನಗದು ಬಹುಮಾನ ದೊರಕಿತು.

ಕುಲಸಚಿವ ಡಾ. ಶಂಕರೆಪ್ಪ ವಣಿಕ್ಯಾಳ, ಪ್ರೊ. ಎ.ಬಿ. ವೇದ ಮೂರ್ತಿ, ಪ್ರಸಾರಾಂಗದ ಡಾ. ಎನ್. ಸಿದ್ದಪ್ಪ ಸೇರಿದಂತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ‌ಸಂಶೋಧಕರು ಹಾಜರಿದ್ದರು.