ಉದ್ಯೋಗ ಕೊಡುವ ಶಿಕ್ಷಣದ ಭರಾಟೆಯಲ್ಲಿ ಮೌಲ್ಯಗಳನ್ನು ಮರೆಯುತ್ತಿದ್ದೇವೆ.
ಹೂವಿನಹಡಗಲಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದಿದ್ದು ಶೈಕ್ಷಣಿಕ ಕ್ಷೇತ್ರ ಸಾಕಷ್ಟು ಸುಧಾರಣೆಯಾಗಿದೆ. ಆದರೆ ಬದುಕು ಕಟ್ಟಿಕೊಡುವ ಮೌಲ್ಯಯುತ ಶಿಕ್ಷಣ ಮರೆಯಾಗುತ್ತಿದೆ ಎಂದು ಸೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಉದ್ಯೋಗ ಕೊಡುವ ಶಿಕ್ಷಣದ ಭರಾಟೆಯಲ್ಲಿ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆಯು ವೈಜ್ಞಾನಿಕವಾಗಿ ಪ್ರಗತಿ ಕಂಡಿದೆ. ಗುಣಮಟ್ಟದ ಶಿಕ್ಷಣದ ಜತೆಗೆ ಬರುವ ದಿನಗಳಲ್ಲಿ ಉದ್ಯೋಗ ಕೊಡುವ ಮೌಲ್ಯಯುತ ಶಿಕ್ಷಣವನ್ನು ನೀಡಬೇಕಿದೆ. ತಂತ್ರಜ್ಞಾನ ಉಪಕರಣಗಳು ಬಂದ ಮೇಲೆ ಮಾನವ ಸಂಪನ್ಮೂಲದ ಪ್ರಗತಿ ಕುಂಠಿತಗೊಂಡಿದ್ದು, ಹೃದಯವನ್ನು ಕೆಡಿಸುವ ಮನಸ್ಸನ್ನು ಕೇಂದ್ರೀಕರಿಸುತ್ತಿದೆ. ಮೌಲ್ಯಯುತ ಸಮಾಜ ನಿರ್ಮಾಣದ ಬಗ್ಗೆ ಯೋಚಿಸಬೇಕಿದೆ ಎಂದರು.ಶಿಕ್ಷಕರಿಂದ ಸಮಾಜದ ಬದಲಾವಣೆ ಸಾಧ್ಯ. ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವುದು ಶಿಕ್ಷಣದ ಮೂಲ ನಿಜವಾದ ಉದ್ದೇಶ. ಪರಿಸರ, ಆರ್ಥಿಕ ಪರಿಸ್ಥಿತಿ, ಸಮಾಜಕ್ಕೆ ಕೊಡುಗೆ ಬಗ್ಗೆ ಚಿಂತನೆ ಮಾಡಬೇಕಿದೆ ಎಂದರು.
ಉತ್ತರಪ್ರದೇಶ, ಬಿಹಾರ ಇತರ ಕೆಲ ರಾಜ್ಯಗಳಲ್ಲಿ ಶಿಕ್ಷಕರೇ ಗಾಂಜಾ ಮಾರುವ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಕರು ಮತ್ತೊಬ್ಬ ಬಾಡಿಗೆ ಶಿಕ್ಷಕರನ್ನು ಪಡೆದು ಶಿಕ್ಷಣ ಕೊಡುತ್ತಿದ್ದಾರೆ. ಆದರೆ ಕರ್ನಾಟಕ ಅದರಲ್ಲೂ ವಿಜಯನಗರ ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ, ಶಿಕ್ಷಕರ ಬೋಧನಾ ವ್ಯವಸ್ಥೆ ಮೇರು ಸ್ಥಾನದಲ್ಲಿದೆ. ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಎಐನಿಂದ ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಮಕ್ಕಳು ಶೇ.100ರಷ್ಟು ಅಂಕ ಗಳಿಸುವುದು ಸುಲಭವಾಗಿದೆ. ಕೇವಲ ತಂತ್ರಜ್ಞಾನಕ್ಕೆ ಜೋತು ಬೀಳದೇ ಉತ್ತಮ ಸಮಾಜ ನಿರ್ಮಾಣದತ್ತ ಗಮನ ಹರಿಸಬೇಕೆಂದರು.ಕಾರ್ಯಕ್ರಮದಲ್ಲಿ ಬಿಇಒ ಕೆ.ಮಂಗಳಾ, ಸೈಟ್ಸ್ ಮತ್ತು ಗೈಡ್ ಜಿಲ್ಲಾ ಪದಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.