ಮೂಡುಬಿದಿರೆ; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ವಾರ್ಷಿಕ ಕಬ್ಸ್-ಬುಲ್ ಬುಲ್ಸ್ ಉತ್ಸವ, ಸ್ಕೌಟ್-ಗೈಡ್ ಮೇಳ ಹಾಗೂ ರೋವರ್ಸ್-ರೇಂಜರ್ಸ್ ಸಮಾಗಮ ಭಾನುವಾರ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ನಡೆಯಿತು.ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ವಸಂತ್ ದೇವಾಡಿಗ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ದೆಸೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಶಿಸ್ತು, ಸಮಾಜ ಸೇವೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಪೂರಕವಾಗಿವೆ ಎಂದರು.ಮುಖ್ಯ ಅತಿಥಿಗಳಾಗಿ ರಾಜ್ಯ ಸಹ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ, ಸ್ಕೌಟ್ ವಿಭಾಗದ ನಾಯಕರಾದ ಶಂಕರ್ ಭಟ್, ಗೈಡ್ ವಿಭಾಗದ ನಾಯಕಿ ಪ್ಲೇವಿ ಡಿಸೋಜ, ಬುಲ್ ಬುಲ್ ವಿಭಾಗದ ನಾಯಕಿ ಸಂಧ್ಯಾ ಶೆಣೈ, ಕಬ್ ವಿಭಾಗದ ನಾಯಕಿ ಸ್ವರ್ಣ ಡಿ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಸಂಧ್ಯಾ, ಲೇಡಿ ಸ್ಕೌಟ್ ಮಾಸ್ಟರ್ ಸುರಕ್ಷಾ ಉಪಸ್ಥಿತರಿದ್ದರು.

ದಿನವಿಡೀ ನಡೆದ ಈ ಮೇಳದಲ್ಲಿ ಕಬ್ಸ್, ಬುಲ್ ಬುಲ್ಸ್, ಸ್ಕೌಟ್ಸ್, ಗೈಡ್ಸ್ ಹಾಗೂ ರೋವರ್ಸ್-ರೇಂಜರ್ಸ್ ವಿಭಾಗದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗಾಳಿಪಟ ತಯಾರಿ, ಗ್ರೀಟಿಂಗ್ಸ್ ತಯಾರಿ, ಕ್ರಾಫ್ಟ್, ಡ್ರಾಯಿಂಗ್ ಮತ್ತು ಮೆಹಂದಿ ರಚನೆ, ಕಸದಿಂದ ರಸ ತಯಾರಿ ಹಾಗೂ ಬೆಂಕಿ ಇಲ್ಲದ ಅಡುಗೆ ಸ್ಪರ್ಧೆಗಳು ನೋಡುಗರ ಗಮನ ಸೆಳೆದವು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಿಸ್ತುಬದ್ಧ ಸಮವಸ್ತ್ರ ಧರಿಸಿದ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಸಮಾಗಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.