ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಯ ಸ್ಥಳಕ್ಕೆ ಪ್ರತಿಮೆ ನಿರ್ಮಾಣ ಶಿಲ್ಪಿ ಕೃಷ್ಣ ನಾಯಕ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.ಸುಮಾರು 2 ರಿಂದ 3 ಸೆಂಟ್ ಜಾಗದಲ್ಲಿ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, 9 ಅಡಿ ಎತ್ತರದ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಸ್ಥಾಪಿಸುವ ಬಗ್ಗೆ ಪ್ರತಿಮೆ ನಿರ್ಮಾಣ ಸಮಿತಿ ಸದಸ್ಯರ ಜೊತೆ ಚರ್ಚಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಸಿ.ಸತೀಶ್ ಮಾತನಾಡಿ ಶಾಸಕರು, ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರ ಒಮ್ಮತದ ಸಹಕಾರದಿಂದ ನಗರದಲ್ಲಿ ಹಲವಾರು ವರ್ಷಗಳಿಂದ ಬೇಡಿಕೆಯಂತೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಈಗಾಗಲೇ ಕಾಮಗಾರಿ ಆರಂಭವಾಗಿದೆ. ಸುಮಾರು 44 ಲಕ್ಷ ರು. ವೆಚ್ಚದಲ್ಲಿ ಡಾ.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಮತ್ತು ಉದ್ಯಾನವನ ನಿರ್ಮಾಣವಾಗಲಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಶಾರದ ನಾಗರಾಜ್, ನಗರಸಭೆ ಮಾಜಿ ಸದಸ್ಯರಾದ ವೀಣಾಕ್ಷಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಜೋಯಪ್ಪ ಹಾನಗಲ್, ಉಪಾಧ್ಯಕ್ಷರಾದ ಮಂಜುನಾಥ್, ಖಜಾಂಚಿ ಪ್ರೇಮ ಕೃಷ್ಣಪ್ಪ, ಸಮಿತಿ ಸದಸ್ಯರಾದ ಎಚ್.ಎಲ್.ದಿವಾಕರ್, ಪ್ರೇಮ್ ಕುಮಾರ್, ದೀಪಕ್ ಪೊನ್ನಪ್ಪ, ಗಣೇಶ್ ಅಶೋಕ್‌ಪುರ, ವಿನಯ್, ಸುದರ್ಶನ್ ಇತರರು ಇದ್ದರು.