ಅಗ್ನಿಶಾಮಕ ದಳದ ನೂರಕ್ಕೂ ಹೆಚ್ಚು ಸಿಬ್ಬಂದಿ ತೀವ್ರ ಹುಡುಕಾಟ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಫಿ ನಾಡಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರ ಬಳಿ ನಾಪತ್ತೆಯಾದ ಕೇರಳದ ಬಾಲಕಿ ಶ್ರೀನಂದಾ ಶೋಧ ಕಾರ್ಯಾಚರಣೆ ಮೂರನೇ ದಿನವೂ ಮುಂದುವರೆದಿದೆ. ಬಾಲಕಿ ಪತ್ತೆಗಾಗಿ ಪೊಲೀಸ್, ಅಗ್ರಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಪರ್ವತ ಶ್ರೇಣಿಯ ಕಡಿದಾದ ಬೆಟ್ಟಗಳಲ್ಲಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಪೋಲಿಸ್ ಹಾಗೂ ಅಗ್ರಿ ಶಾಮಕ ದಳದ ಸಿಬ್ಬಂದಿ ತಳಕ್ಕೆ ಇಳಿದು ಹುಡುಕಾಟ ನಡೆಸಿದ್ದಾರೆ. ಇದಲ್ಲದೆ ಥರ್ಮಲ್ ಡ್ರೋಣ್ ಕ್ಯಾಮೆರಾ ಬಳಸಿ ಬಾಲಕಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಇದುವರೆಗೆ ಬಾಲಕಿ ಮಾತ್ರ ಪತ್ತೆಯಾಗಿಲ್ಲ.ಗುರುವಾರ ಬೆಳಗ್ಗೆಯಿಂದಲೇ ಪೊಲೀಸ್ ಅರಣ್ಯ ಇಲಾಖೆ, ಎಸ್ ಡಿಆರ್ ಎಫ್ ಹಾಗೂ ಅಗ್ನಿಶಾಮಕ ದಳದ ನೂರಕ್ಕೂ ಹೆಚ್ಚು ಸಿಬ್ಬಂದಿ ಮಾಣಿಕ್ಯಧಾರ ಜಲಪಾತದ ಭಾಗದಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲಿಯೂ ಬಾಲಕಿಯ ಸುಳಿವು ಪತ್ತೆಯಾಗಿಲ್ಲ.
ಚಂದ್ರದ್ರೋಣ ಪರ್ವತ ಶ್ರೇಣಿ ವಿವಿಧ ಜೀವ ಸಂಕುಲದ ಆವಾಸ ಸ್ಥಾನವಾಗಿದೆ. ಇಲ್ಲಿ ಯಾವುದೇ ಪ್ರಾಣಿ ಬಾಲಕಿಯ ಮೇಲೆ ದಾಳಿ ನಡೆಸಿದ್ದರೂ ಸಣ್ಣ ಸುಳಿವಾದರೂ ಸಿಗಬೇಕಿತ್ತು. ಆದರೆ ಮೂರು ದಿನಗಳ ಸತತ ಕಾರ್ಯಾಚರಣೆ ಬಳಿಕವೂ ಬಾಲಕಿಯ ಸುಳಿವು ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.-- ಬಾಕ್ಸ್...
ಮಾಹಿತಿ ಪಡೆದ ಐಜಿಪಿ
ಕೇರಳ ಮೂಲದ ದ್ವಾರಕೆ ಮಾಣಿಕ್ಯಧಾರ ಬಳಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿಗೆ ಆಗಮಿಸಿದ ಐಜಿಪಿ ಅಮಿತ್ ಸಿಂಗ್ ಪ್ರಕರಣದ ಕುರಿತಂತೆ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರ ಬಳಿ ಮಾಹಿತಿ ಪಡೆದರು. ಜತೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಾಲಕಿ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.