ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳಮಂಗಳೂರಿನ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಪ್ಠಾನ, ಬ್ಯಾಂಕ್ ಆಫ್ ಬರೋಡ, ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಎನ್.ಆರ್.ಎಲ್.ಎಂ. ಕಾರ್ಕಳ ಘಟಕಗಳ ಆಶ್ರಯದಲ್ಲಿ ಕಾರ್ಕಳದ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಿಗೆ ಸ್ವಾವಲಂಬಿ ಜೀವನಕ್ಕಾಗಿ ಮೂರು ದಿನಗಳ ಅಲಂಕಾರಿಕ ಕ್ಯಾಂಡಲ್, ಫಿನಾಯಿಲ್ ಮತ್ತು ಸಾಬೂನು ತಯಾರಿಕೆ ತರಬೇತಿ ನಡೆಯಿತು.ತರಬೇತಿಯ ಸಮಾರೋಪ ಸಮಾರಂಭದಲ್ಲಿ ಕಾರ್ಕಳ ತಾ.ಪಂ. ವ್ಯವಸ್ಥಾಪಕ ಹರೀಶ್ ಭಾಗವಹಿಸಿ, ಸ್ವಂತ ಉದ್ಯಮ ಸ್ಥಾಪನೆಗೆ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಜ್ಞಾನ ಅಗತ್ಯ. ಈ ತರಬೇತಿಯಿಂದ ಸ್ವಂತ ಉದ್ಯೋಗವನ್ನು ಮಾಡಿ ಮುಂದುವರಿದರೆ ಜೀವನಕ್ಕೆ ಒಂದು ದಾರಿಯಾಗುತ್ತದೆ ಎಂದು ಸಲಹೆಯನ್ನಿತ್ತರು.ಕುಕ್ಕೂಂದೂರಿನ ಬ್ಯಾಂಕ್ ಆಫ್ ಬರೋಡದ ಶಾಖಾ ವ್ಯವಸ್ಥಾಪಕ ವಿಶ್ವನಾಥ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸ್ವ-ಉದ್ಯೋಗ ಮಾಡಲು ಮುಂದೆ ಬರಬೇಕು. ಮಹಿಳೆಯರು ತರಬೇತಿ ಹೊಂದಿ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು ಉದ್ಯೋಗದಲ್ಲಿ ಯಶಸ್ವಿಯಾಗಬೇಕು ಎಂದು ಕಿವಿಮಾತು ಹೇಳಿದರು.ಮಂಗಳೂರಿನ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಹೆಗ್ಡೆ, ಸಂಪನ್ಮೂಲ ವ್ಯಕ್ತಿ ಉಡುಪಿಯ ನೀನಾ ಶೆಟ್ಟಿ ಶುಭಹಾರೈಸಿದರು.ಕಾರ್ಯಕ್ರಮ ಅಧಿಕಾರಿ ಬಿವಿಟಿಯ ಪ್ರತಿಮಾ, ಈ ತರಬೇತಿಯ ಉತ್ಪನ್ನಗಳಿಗೆ ಇರುವ ಮಾರುಕಟ್ಟೆಯ ಮಾಹಿತಿ ಹಾಗೂ ಮಹಿಳೆಯರಿಗೆ ಸ್ವ-ಉದ್ಯೋಗದ ಮಹತ್ವವನ್ನು ತಿಳಿಸಿದರು. ಎನ್.ಆರ್.ಎಲ್.ಎಂ.ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಉಮಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಎನ್.ಆರ್.ಎಲ್.ಎಂನ ಉಸ್ತುವಾರಿ ಬಬಿತಾ ಮತ್ತು ಜೀವಿತಾ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.