ಸಾರಾಂಶ
ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಪರಿಕರ ಮಾರಾಟಗಾರರ ಸಭೆ
ಕನ್ನಡಪ್ರಭ ವಾರ್ತೆ, ನರಸಿಹಂರಾಜಪುರಪರವಾನಿಗೆ ಇಲ್ಲದೆ ಅನಧಿಕೃತವಾಗಿ ರಸಗೊಬ್ಬರ ಮಾರಾಟ ಮಾಡುವುದು ಕಾನೂನು ಬಾಹಿರವಾಗುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿ ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕ ತಿಮ್ಮನ ಗೌಡ ಪಾಟೀಲ್ ತಿಳಿಸಿದರು.
ಬುಧವಾರ ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ನಡೆದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಮಾತನಾಡಿ, ಕೃಷಿ ಪರಿಕರ ಮಾರಾಟ ಮಾಡುವ ಸಂದರ್ಭದಲ್ಲಿ ಅಂಗಡಿಯಲ್ಲಿ ಪರವಾನಿಗೆ ಲೈಸನ್ಸ್ ನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶನ ಮಾಡಬೇಕು. ರೈತರು ರಸ ಗೊಬ್ಬರ ಹಾಗೂ ಇತರೆ ಕೃಷಿ ಪರಿಕರಗಳನ್ನು ಖರೀದಿಸಿದಾಗ ಅಧಿಕೃತ ಬಿಲ್ ನೀಡಬೇಕು ಎಂದರು.ಅಂಗಡಿಗಳಿಗೆ ಬರುವ ರೈತರಿಗೆ ಪ್ರತಿ 2 ವರ್ಷಕ್ಕ್ಮೊಮ್ಮೆ ಮಣ್ಣು ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಬೇಕು. ಮಲೆನಾಡಿನ ಭಾಗದ ಮಣ್ಣಿನಲ್ಲಿ ಹುಳಿ ಮಣ್ಣು ಸಾಂದ್ರತೆ ಹೆಚ್ಚು ಇರುವುದರಿಂದ ಸುಣ್ಣ ಮತ್ತು ಡೊಲೊಮೈಟ್ ನ್ನು ಮಣ್ಣಿಗೆ ಹಾಕಬೇಕು ಎಂದು ರೈತರಿಗೆ ಸಲಹೆ ನೀಡಬೇಕು ಎಂದು ಕೃಷಿ ಪರಿಕರ ಮಾರಾಟಗಾರರಿಗೆ ಸೂಚಿಸಿದರು. ಎಂಆರ್ ಪಿ ದರಕ್ಕಿಂತ ಜಾಸ್ತಿ ಬೆಲೆಗೆ ಮಾರಾಟ ಮಾಡಬಾರದು. ಪ್ರತಿ ಕೃಷಿ ಪರಿಕರ ಮಾರಾಟದ ಅಂಗಡಿ ಮುಂದೆ ದರಪಟ್ಟಿ ಹಾಕಬೇಕು. ದಾಸ್ತೂನು ಪುಸ್ತಕ ಹಾಗೂ ಇತರೆ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಪಿಒಎಸ್ ಯಂತ್ರದಲ್ಲಿ ದಾಸ್ತಾನನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ನಂತರ ರಸಗೊಬ್ಬರ ನಿಯಂತ್ರಣದ ಆದೇಶ, ಕೀಟ ನಾಶಕ ಅಧಿನಿಯಮಗಳ ಆದೇಶ, ಅಗತ್ಯ ವಸ್ತುಗಳ ಅಧಿನಿಯಮ ( 1955 ) ಹಾಗೂ ಬೀಜಗಳ ಅಧಿನಿಯಮ (1966) ಗಳ ಬಗ್ಗೆ ಮಾಹಿತಿ ನೀಡಿದರು.ನರಸಿಂಹರಾಜಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಎಸ್.ಬಿ ಮಾತನಾಡಿ, ಕೃಷಿ ಪರಿಕರ ಮಾರಾಟ ಗಾರರು ಪ್ರತಿ ತಿಂಗಳ 5 ನೇ ತಾರೀಕಿನ ಒಳಗೆ ರಸಗೊಬ್ಬರ ಹಾಗೂ ಕೀಟನಾಶದ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮಾಹಿತಿ ನೀಡುವುದು ಕಡ್ಡಾಯ. ಪರವಾನಿಗೆ ಇಲ್ಲದೆ ರಸಗೊಬ್ಬರ, ಕೀಟನಾಶಕ ಮಾರಾಟ ಮಾಡಿದರೆ ಅಪರಾಧವಾಗುತ್ತದೆ ಎಂದರು. ಕೃಷಿ ಇಲಾಖೆ ದಾಸ್ತಾನು ನಿರ್ವಾಹಕ ಅರುಣ್ ಸ್ವಾಗತಿಸಿದರು. ತಾಲೂಕಿನ ವಿವಿಧ ಕೃಷಿ ಪರಿಕರ ಮಾರಾಟಗಾರರು ಸಭೆಯಲ್ಲಿ ಭಾಗವಹಿಸಿದ್ದರು.