ದೇವರಲ್ಲಿನ ದಾಸ್ಯತ್ವಕ್ಕೆ ಅನನ್ಯ ಭಕ್ತಿ ಅಗತ್ಯ: ಕಂಠಪಲ್ಲಿ

| Published : Jan 28 2025, 12:45 AM IST

ಸಾರಾಂಶ

ದೇವರ ದಾಸರಾಗುವುದು ಸಣ್ಣ ಮಾತಲ್ಲ. ಅಂಥ ದಾಸ್ಯತ್ವ ಬರಬೇಕಾದರೆ ಅನನ್ಯ ಭಕ್ತಿ, ಮತ್ತು ನೈಜಕರ್ಮಗಳ ಸತ್ಫಲಗಳು ಬೇಕು. ಕನಕದಾಸರು ಮತ್ತು ಪುರಂದರದಾಸರು ಮತ್ತು ಶ್ರೀ ಪೀಠದಲ್ಲಿ ಕುಳತ ರಾಯರನ್ನು ಒಟ್ಟಿಗೆ ಸ್ಮರಿಸಿದರೆ ಸಾಕು. ಇಲ್ಲಿಯೇ ಕುಂಭಮೇಳದ ಫಲ ಬಂದಂತೆ.

ಹುಬ್ಬಳ್ಳಿ:

ಅನೇಕ ಯತಿವರ್ಯರು ರಚಿಸಿದ ಶಾಸ್ತ್ರಗ್ರಂಥಗಳನ್ನು ಅವಲೋಕಿಸಿದಾಗ ಅಪರೋಕ್ಷ ಜ್ಞಾನಿಗಳಾದ ಕನಕದಾಸರ ಕೀರ್ತನೆ ಅರ್ಥವಾಗುತ್ತವೆ. ಅವರ ಕೀರ್ತನೆಗಳಲ್ಲಿ ಐಹಿಕ ವ್ಯವಹಾರಗಳಿಂದ ಪಾರಮಾರ್ಥಿಕ ಪಥ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ಪಂ. ಸಮೀರಣಾಚಾರ್ಯ ಕಂಠಪಲ್ಲಿ ಹೇಳಿದರು.

ಸಂಯುತಾ ಪ್ರತಿಷ್ಠಾನ, ನಂಜನಗೂಡು ರಾಯರ ಮಠ, ಟಿಟಿಡಿ ಹಾಗೂ ಗುರುಸಾರ್ವಭೌಮ ದಾಸ ಪ್ರೊಜೆಕ್ಟ್ ಮತ್ತು ಕ್ಷಮತಾ ಸಂಸ್ಥೆಗಳ ಸಹಯೋಗದಲ್ಲಿ ಭವಾನಿನಗರದ ರಾಯರ ಮಠದಲ್ಲಿ ಆಯೋಜಿಸುತ್ತಿರುವ ಕನಕ-ಪುರಂದರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವರ ದಾಸರಾಗುವುದು ಸಣ್ಣ ಮಾತಲ್ಲ. ಅಂಥ ದಾಸ್ಯತ್ವ ಬರಬೇಕಾದರೆ ಅನನ್ಯ ಭಕ್ತಿ, ಮತ್ತು ನೈಜಕರ್ಮಗಳ ಸತ್ಫಲಗಳು ಬೇಕು. ಕನಕದಾಸರು ಮತ್ತು ಪುರಂದರದಾಸರು ಮತ್ತು ಶ್ರೀ ಪೀಠದಲ್ಲಿ ಕುಳತ ರಾಯರನ್ನು ಒಟ್ಟಿಗೆ ಸ್ಮರಿಸಿದರೆ ಸಾಕು. ಇಲ್ಲಿಯೇ ಕುಂಭಮೇಳದ ಫಲ ಬಂದಂತೆ ಎಂದು ಅನ್ವಯ ಮಾಡಿದರು. ನಂತರ ಕನಕರ ಮುಂಡಿಗೆಗಳನ್ನು ವಿಸ್ತೃತವಾಗಿ ವಿವರಿಸಿದರು.

ವಿನಯಕಾಲನಿಯ ಮಹಾಲಕ್ಷ್ಮಿ ಭಜನಾ ಮಂಡಳಿಯಿಂದ ದಾಸರ ಕೀರ್ತನೆ ಪ್ರಸ್ತುತಗೊಂಡವು.

ಸುಶೀಲೇಂದ್ರಾಚಾರ್ಯ ಬೆಳಗಲಿ ಪ್ರವಚನ ನೀಡಿ, ಕನಕದಾಸರ ಮುಂಡಿಗೆಗಳಲ್ಲಿ ಗೂಡಾರ್ಥ ಬಹಳ, ಸರಿಯಾಗಿ ಅರ್ಥ ಮಾಡಿಕೊಂಡಲ್ಲಿ ನಮ್ಮ ಜೀವನ ಪಾವನವಾಗುತ್ತದೆ. ಅಲ್ಲದೇ ಅವರ ಕೀರ್ತನೆಗಳಲ್ಲಿ ದೇಸಿಯತೆ ಎದ್ದು ಕಾಣುತ್ತದೆ. ಸಾಹಿತ್ಯದ ಲಾಲಿತ್ಯದ ವೈಭವ ಸೂರೆಗೊಳ್ಳುತ್ತಿದೆ. ಪುರಂದರ ದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಕಳಕಳಿ ಎದ್ದು ಕಾಣುತ್ತಿದೆ ಎಂದರು.

ಧಾರವಾಡದ ಶ್ರೀತಾರಕೇಶ್ವರ ಭಜನಾ ಮಂಡಳಿಯಿಂದ ದಾಸರ ಕೀರ್ತನೆಗಳ ಭಜನೆ ನಡೆಯಿತು. ಶ್ರೀಮಠದ ವ್ಯವಸ್ಥಾಪಕ ಕೆ. ವೇಣುಗೋಪಾಲಾಚಾರ್ಯ, ವಿಚಾರಣಾಕರ್ತ ಎ.ಸಿ. ಗೋಪಾಲ, ಸಂಯುತಾ ಪ್ರತಿಷ್ಠಾನದ ಅಧ್ಯಕ್ಷ ಪಿ.ಎಸ್. ಪರ್ವತಿ, ಟಿಟಿಡಿ ದಾಸ ಪ್ರೊಜೆಕ್ಟ್ ಸಂಚಾಲಕ ಗೋಪಾಲ ಕುಲಕರ್ಣಿ, ವಿಷ್ಣುತೀರ್ಥ ಕಲ್ಲೂರಕರ, ಮನೋಹರ ಪರ್ವತಿ, ಜನಮೇಜಯ ಉಮ್ಮರ್ಜಿ, ಸುಶೀಲೇಂದ್ರ ಕುಂದರಗಿ, ಬಿಂದುಮಾಧವ ಪುರೋಹಿತ ನೂರಾರು ಭಕ್ತರು ಮಹಿಳಾ ಮಂಡಳಗಳ ಸಾಧಕಿಯರು ಪಾಲ್ಗೊಂಡಿದ್ದರು.