ಸಾರಾಂಶ
ಒಳಚರಂಡಿ ತ್ಯಾಜ್ಯ ಪಂಪ್ ಮಾಡಲಾಗದೇ ಶರಾಬಿ ನದಿಗೆ ತ್ಯಾಜ್ಯ ಬೀಡಲಾಗುತ್ತಿದ್ದು, ನದಿ ಸಂಪೂರ್ಣ ಮಲೀನವಾಗಿದೆ.
ಭಟ್ಕಳ:
ಪಟ್ಟಣದ ವೃತ್ತದಲ್ಲಿ ಮೇಲ್ಭಾಗದ ಹೆದ್ದಾರಿ ಒಳಚರಂಡಿ ಪೈಪ್ಲೈನ್ನನ್ನು ಗೌಸೀಯಾ ಸ್ಟ್ರೀಟ್ ನಲ್ಲಿರುವ ವೆಟ್ವೆಲ್ಗೆ ಜೋಡಿಸಲು ಪುರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಮಿತಿ ರಚನೆ ಮಾಡಲು ನಿರ್ಣಯಿಸಲಾಯಿತು.ವೃತ್ತದ ಮೇಲ್ಭಾಗದ ಒಳಚರಂಡಿ ಪೈಪ್ಲೈನ್ನ್ನು ಈ ಹಿಂದೆ ವೆಂಕಟಾಪುರ ತ್ಯಾಜ್ಯ ಶುದ್ಧೀಕರಣ ಘಟಕ ಮಾರ್ಗವಾಗಿ ಚೇಂಬರ್ ನಿರ್ಮಿಸಿ ಪೈಪ್ಲೈನ್ ಅಳವಡಿಸಲಾಗಿತ್ತು. ಈಗ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್ಬಿ ಕಂಪನಿ ಒಳಚರಂಡಿ ಪೈಪ್ಲೈನ್ ಕೆಳ ಮಾರ್ಗವಾಗಿ ತಂದು ಪುನಃ ಗೌಸಿಯಾ ಸ್ಟ್ರೀಟ್ ನಲ್ಲಿರುವ ವೆಟ್ವೆಲ್ಗೆ ನೀಡಲು ಮುಂದಾಗಿದೆ. ಈಗಾಗಲೇ ಪಟ್ಟಣದ ಕೆಳಭಾಗದ ಒಳಚರಂಡಿ ತ್ಯಾಜ್ಯ ಪಂಪ್ ಮಾಡಲಾಗದೇ ಶರಾಬಿ ನದಿಗೆ ತ್ಯಾಜ್ಯ ಬೀಡಲಾಗುತ್ತಿದ್ದು, ನದಿ ಸಂಪೂರ್ಣ ಮಲೀನವಾಗಿದೆ. ಮೇಲ್ಭಾಗದ ತ್ಯಾಜ್ಯ ಕೆಳ ಬರಲು ಬೀಡುವುದಿಲ್ಲ ಎಂದು ಪುರಸಭೆ ಸದಸ್ಯರು ವೃತ್ತದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ನಿಲ್ಲಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಐಆರ್ಬಿಯವರು ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ಹಾಗೂ ಅಭಿಯಂತರರ ಅವರ ಗಮನಕ್ಕೆ ತಂದು ನಕ್ಷೆಯಂತೆ ಒಳಚರಂಡಿ ಕಾಮಗಾರಿ ನಡೆಸಲಾಗುತ್ತಿದೆ. ಈಗಾಗಲೇ ರಂಗಿನಕಟ್ಟೆ ಭಾಗದಿಂದ ಕೆಳಗಡೆ ಮುಖವಾಗಿ ಆಳವಾಗಿ ಹೊಂಡ ತೆಗೆದು ಚೇಂಬರ್ ಅಳವಡಿಸಲಾಗಿದೆ. ಈಗ ಪುನಃ ಹಿಮ್ಮುಖವಾಗಿ ಕಾಮಗಾರಿ ಮಾಡಲು ಅಸಾಧ್ಯ ಎಂದು ಹೇಳಿದ್ದಾರೆ.ಅಧಿಕಾರಿಗಳಿಂದ ಮಾಹಿತಿ ಪಡೆದ ಸಹಾಯಕ ಆಯುಕ್ತರು ಪಟ್ಟಣದ ಮೇಲ್ಭಾಗದ ಒಳಚರಂಡಿ ನೀರು ಯಾವ ಕಡೆ ಸಾಗಬೇಕು ಎನ್ನುವ ಬಗ್ಗೆ ಅಧ್ಯಯನ ಮಾಡಲು ಒಂದು ಸಮಿತಿ ರಚಿಸಿ ವಾರದೊಳಗೆ ಅವರಿಂದ ಮಾಹಿತಿ ಪಡೆದು ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಅಭಿಯಂತರ ಅರವಿಂದ, ಒಳಚರಂಡಿ ಹಾಗೂ ನೀರು ಸರಬರಾಜು ಇಲಾಖೆ ಅಭಿಯಂತರ ಅಜಯ ಹಾಗೂ ಐಆರ್ಬಿ ಅಭಿಯಂತರ ಸುದೇಶ ಶೆಟ್ಟಿ ಮುಂತಾದವರಿದ್ದರು.