ಯಲಬುರ್ಗಾ: ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಹೊಲಿಗೆ ಯಂತ್ರ ಸಹಕಾರಿಯಾಗಿದೆ ಎಂದು ಆರ್‌ಎಸ್‌ಇಟಿಟಿ ನಿರ್ದೇಶಕ ರಾಯೇಶ್ವರ ಪೈ ಹೇಳಿದರು.

ತಾಲೂಕಿನ ಬೇವೂರು ಗ್ರಾಮದಲ್ಲಿ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹಾಗೂ ಕೂಡಲಸಂಗಮೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ನಡೆದ ಉಚಿತ ಮಹಿಳಾ ಹೊಲಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಸ್ವಯಂ ಉದ್ಯೋಗ ಸಂಸ್ಥೆಯಿಂದ ೩೦ದಿನಗಳ ಕಾಲ ಮಹಿಳೆಯರಿಗೆ ಉಚಿತ ಹೊಲಿಗೆಯಂತ್ರ ತರಬೇತಿ ನೀಡಲಾಗುತ್ತದೆ. ಬಳಿಕ ಸರ್ಟಿಫಿಕೇಟ್ ನೀಡಲಾಗುತ್ತಿದ್ದು, ಸ್ವಯಂ ಉದ್ಯೋಗಕ್ಕಾಗಿ ಸಂಬಂಧಿಸಿದ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಪಡೆಯಲು ನೆರವಾಗುತ್ತದೆ. ಇದರಿಂದ ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗುತ್ತದೆ. ಹೀಗಾಗಿ ಅರ್ಹ ಮಹಿಳೆಯರು ಈ ತರಬೇತಿಯ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭ ಎಸ್‌ಕೆಎಸ್ ಸಂಸ್ಥೆಯ ಕಾರ್ಯದರ್ಶಿ ದ್ಯಾಮಣ್ಣ ಗೊಂದಿ, ಪ್ರಸಾದ್, ಲಕ್ಷ್ಮೀ ಅಂಗಡಿ, ವನಿತಾ ಕವಳಕೇರಿ, ಪದ್ಮಾವತಿ, ಗೀತಾ, ಜ್ಯೋತಿ, ಮಂಜುಳಾ, ಕವಿತಾ, ಸರೋಜಮ್ಮ, ಶಾಂತಾ ಸೇರಿದಂತೆ ಇತರರು ಇದ್ದರು.