ಸಾರಾಂಶ
ವಿಜಯಪುರ: ಅಸುರರನ್ನು ಸಂಹರಿಸುವ ಮೂಲಕ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಲು ಶಕ್ತಿದೇವಿಯ ರೂಪಗಳನ್ನು ಪಡೆದ ಬಗ್ಗೆ ಪುರಾಣಗಳಲ್ಲಿದೆ. ಭಯ, ಶತ್ರು ನಿವಾರಣೆಯಾಗಿ ಅರಿಷಡ್ವರ್ಗಗಳು, ವಿವಿಧ ದುರ್ಗುಣಗಳನ್ನು ವರ್ಜಿಸಿ ಸದ್ಗುಣಗಳನ್ನು ರೂಢಿಸಿಕೊಳ್ಳಲು ಪ್ರತಿಜ್ಞೆ ಮಾಡಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ಪಟ್ಟಣದ ಶ್ರೀ ಬಸವೇಶ್ವರ ಬಡಾವಣೆಯ ಶಿಕ್ಷಕ ಕೆ.ಎಚ್.ಚಂದ್ರಶೇಖರ್-ಓಂಕಾರಮ್ಮ ದಂಪತಿ ನಿವಾಸದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಪಟ್ಟಣ ಕಸಾಪ, ಸೀನಿಯರ್ ಚೇಂಬರ್, ಕಲಾವಿದರ ಸಂಘಗಳ ಆಶ್ರಯದಲ್ಲಿ ದುರ್ಗಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿ ಮಾತನಾಡಿದರು.ಪೂಜಿಸುವ ಪದ್ಧತಿಯೇ ವಿಶಿಷ್ಟ: ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಕಾಮಕ್ರೋಧ, ಲೋಭ, ಮೋಹ, ಮದ, ಮತ್ಸರ, ದ್ವೇಷ, ಭವ, ವಿವಶತೆಗಳಂತಹ ದುರ್ಗುಣಗಳು ತೊಲಗಿ ಪ್ರೀತಿ, ಶಾಂತಿ, ಸಹನೆ, ದಯೆ, ಕರುಣೆ, ಕ್ಷಮೆ, ಅನುಕಂಪ, ಸಹಾಯ, ಸಹಕಾರ, ಧೈರ್ಯದಂತಹ ಸದ್ಗುಣಗಳು ಮನೆ ಮಾಡಬೇಕು. ಬಲವರ್ಧನೆ, ಅಧಿಕಾರ, ಮೃತ್ಯುವನ್ನು ಗೆಲ್ಲಲು ತಾಮಸಿಕ ರೂಪವನ್ನು, ಐಶ್ವರ್ಯ, ಧೀರ್ಘಾಯಸ್ಸು, ಐಹಿಕ ಭೋಗ, ಉದಾತ್ತ ಮೌಲ್ಯಗುಣಗಳಿಗಾಗಿ ರಾಜಸಿಕ ರೂಪವನ್ನು, ಜ್ಞಾನ, ಅರಿವಿನ ವೃದ್ಧಿಗೊಳಿಸಿಕೊಂಡು ನಶ್ವರದ ದೈಹಿಕ ಪರಿಮಿತಿಗಳನ್ನು ದಾಟಲು ಸಾತ್ವಿಕರೂಪವನ್ನು ಪೂಜಿಸುವ ಪದ್ಧತಿಯೇ ವಿಶಿಷ್ಟವಾದುದು ಎಂದರು.
ಪಟ್ಟಣ ಕಸಾಪ ಅಧ್ಯಕ್ಷ ಜೆ.ಎನ್.ಶ್ರೀನಿವಾಸ್ ಮಾತನಾಡಿ, ಶಮೀವೃಕ್ಷವನ್ನು ಪೂಜಿಸಿ ಬನ್ನಿಪತ್ರೆ ಹಂಚಿಕೊಂಡು ಒಳ್ಳೆಯ ಮಾತುಗಳನ್ನು ಆಡುವ ಮೂಲಕ ತಮ್ಮಲ್ಲಿರುವ ವೈಷಮ್ಯ ಮರೆತು ಶಾಂತಿ, ಸೌಹಾರ್ದತೆ ಬೆಳೆಸಿಕೊಳ್ಳುವ ಶರಕ್ಲಾದ ನವರಾತ್ರಿ ಪೂಜೆಯಂತಹ ಆಚರಣೆಗಳು ವಿಶ್ವಶಾಂತಿ ನೆಲೆಸಲು ಜಗತ್ತಿಗೆ ಮಾದರಿಯಾದುದು ಎಂದರು.ಬೆಂ.ಗ್ರಾ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿದರು. ಪುರಸಭಾ ಸದಸ್ಯ ಸಿ.ಎಂ.ರಾಮು, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಶ್ರೀರಾಮ್, ಖಜಾಂಚಿ ಮುನಿರಾಜು, ಉಪಾಧ್ಯಕ್ಷ ಮುನಿಕೃಷ್ಣಪ್ಪ, ನಿರ್ದೇಶಕ ಮುರಳಿ, ಮುನಿರಾಜು, ಜೇಸೀಐ ಅಧ್ಯಕ್ಷ ಬೈರೇಗೌಡ, ಮಾಜಿ ಅಧ್ಯಕ್ಷ ಮುನಿವೆಂಕಟರಮಣಪ್ಪ, ಜೆ.ಆರ್.ಮುನೀರಣ್ಣ, ಕಲಾವಿದರ ಸಂಘದ ಕಾರ್ಯದರ್ಶಿ ಸುಬ್ರಮಣಿ, ಗೋವಿಂದರಾಜು, ನಿವೃತ ಮುಖ್ಯಶಿಕ್ಷಕ ಕೆ.ಎಚ್.ಚಂದ್ರಶೇಖರ್, ಓಂಕಾರಮ್ಮ, ಮಣಿಕಂಠ, ತನುಜಾ, ಶಿಕ್ಷಕ ಎ.ಬಿ.ಪರಮೇಶ್, ಶಿವಾನಂದ್, ಮಂಜುನಾಥ್, ಅಬ್ದುಲ್ ಸತ್ತಾರ್, ವಕೀಲ ಹರೀಶ್, ಮೇಘನಾ, ಮತ್ತಿತರರು ಇದ್ದರು. ಮುಖ್ಯಶಿಕ್ಷಕ ಎ.ಎಂ.ನಾರಾಯಣಸ್ವಾಮಿ, ಕೃಷ್ಣಪ್ಪ ತಂಡದವರಿಂದ ಕನ್ನಡ ಗೀತ ಗಾಯನ ನಡೆಯಿತು. ನಿವೃತ್ತ ಮುಖ್ಯಶಿಕ್ಷಕಿ ಓಂಕಾರಮ್ಮ ಕೆ.ಎಚ್.ಚಂದ್ರಶೇಖರ್ ದಂಪತಿಗಳನ್ನು ಪಟ್ಟಣ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು. ದುರ್ಗಾ ಸಪ್ತಸ್ತುತಿ ಪಾರಾಯಣ, ದುರ್ಗಾಪೂಜೆ ನೆರವೇರಿಸಲಾಯಿತು.