ಸಾರಾಂಶ
ಶನಿವಾರಸಂತೆ ಹೋಬಳಿ ಘಟಕದ ವತಿಯಿಂದ ಅ.10 ರಂದು ಮಡಿಕೇರಿಯಲ್ಲಿ ನಡೆಯಲಿರುವ ಜಾನಪದ ದಸರಾದಲ್ಲಿ ಕಾರ್ಯಕ್ರಮ ನೀಡುವ ಬಗ್ಗೆ ತೀರ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕರ್ನಾಟಕ ಜಾನಪದ ಪರಿಷತ್ ಶನಿವಾರಸಂತೆ ಹೋಬಳಿ ಘಟಕದ ವಾರ್ಷಿಕ ಸಭೆ ಘಟಕದ ಅಧ್ಯಕ್ಷೆ ಡಿ.ಸುಜಲಾದೇವಿ ಅಧ್ಯಕ್ಷತೆಯಲ್ಲಿ ಸುಪ್ರಜ ಗುರುಕುಲ ಶಾಲೆಯಲ್ಲಿ ನಡೆಯಿತು. ಮುಂದಿನ ದಿನಗಳಲ್ಲಿ ಶನಿವಾರಸಂತೆ ಹೋಬಳಿ ಘಟಕದ ವತಿಯಿಂದ ಜಾನಪದ ಸಂಸ್ಕೃತಿಗೆ ಸಂಬಂಧ ಪಟ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಘಟಕವನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ಘಟಕದ ಗೌರವ ಅಧ್ಯಕ್ಷ ಸರ್ದಾರ್ ಅಹಮದ್ ಅಭಿಪ್ರಾಯ ವ್ಯಕ್ತ ಪಡಿಸಿದರು.ಘಟಕದಿಂದ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಯಲ್ಲಿ ಘಟಕವನ್ನು ಇತರ ಸಂಘ-ಸಂಸ್ಥೆಗಳಲ್ಲಿರುವ ನಿಯಮಗಳಂತೆ ಬೆಳೆಸಬೇಕಾಗುತ್ತದೆ ಎಂದು ಘಟಕದ ಖಜಾಂಚಿ ಹರೀಶ್ಕುಮಾರ್ ಅಭಿಪ್ರಾಯ ವ್ಯಕ್ತ ಪಡಿಸಿದರು.
ಶನಿವಾರಸಂತೆ ಹೋಬಳಿ ಘಟಕದ ವತಿಯಿಂದ ಅ.10 ರಂದು ಮಡಿಕೇರಿಯಲ್ಲಿ ನಡೆಯಲಿರುವ ಜಾನಪದ ದಸರಾದಲ್ಲಿ ಕಾರ್ಯಕ್ರಮ ನೀಡುವ ಬಗ್ಗೆ ತೀರ್ಮಾನಿಸಲಾಯಿತು.ಅಧ್ಯಕ್ಷತೆ ವಹಿಸಿದ ಘಟಕದ ಅಧ್ಯಕ್ಷೆ ಡಿ.ಸುಜಲಾದೇವಿ ಮಾತನಾಡಿ, ಜಾನಪದ ಪರಿಷತ್ ಘಟಕದ ವತಿಯಿಂದ ಮುಂದಿನ ದಿನಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು ಈ ನಿಟ್ಟಿನಲ್ಲಿ ಘಟಕದ ಸದಸ್ಯರು ಕಾರ್ಯಕ್ರಮಗಳ ಯಶಸ್ವಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಘಟಕದ ಅಧ್ಯಕ್ಷೆ ಮತ್ತು ಕಾರ್ಯದರ್ಶಿ ಸ್ಥಾನ ಹೊರತು ಪಡಿಸಿದಂತೆ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಉಪಾಧ್ಯಕ್ಷರಾಗಿ ಕೆ.ಎನ್.ದಿನೇಶ್ ಮಾಲಂಬಿ, ಖಜಾಂಚಿಯಾಗಿ ಎಚ್.ಆರ್.ಹರೀಶ್ ಕುಮಾರ್ ಮತ್ತು ಸಹ ಕಾರ್ಯದರ್ಶಿಯಾಗಿ ಭಾಸ್ಕರ್ ಮುಳ್ಳೂರು ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಸಭೆಯಲ್ಲಿ ಘಟಕದ ಸದಸ್ಯ ಎಸ್.ಆರ್.ಶೋಭಾವತಿ, ಮನುಫ್ಪಾಷ ಹಾಜರಿದ್ದರು.