ಸಾರಾಂಶ
ಕನ್ನಡಪ್ರಭ ವಾರ್ತೆ ಖಾನಾಪುರಪಟ್ಟಣದ ತೋಪಿನಕಟ್ಟಿ ಮಹಾಲಕ್ಷ್ಮೀ ಗ್ರುಪ್ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಪಬ್ಲಿಕ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು 2023-24ನೇ ಶೈಕ್ಷಣಿಕ ವರ್ಷದ ಸಿಬಿಎಸ್ಇ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯುವ ಮೂಲಕ ಸತತ 10ನೇ ವರ್ಷವೂ ತಮ್ಮ ಸಾಧನೆಯ ಗುರಿಯನ್ನು ಗಟ್ಟಿಗೊಳಿಸಿದ್ದಾರೆ ಎಂದು ಶಾಲೆಯ ಸಂಸ್ಥಾಪಕ ಹಾಗೂ ಶಾಸಕ ವಿಠ್ಠಲ ಹಲಗೇಕರ ಹೇಳಿದರು.ಪಟ್ಟಣದ ಪಾರಿಶ್ವಾಡ ರಸ್ತೆಯ ಶಾಲಾ ಸಭಾಗೃಹದಲ್ಲಿ ಮಂಗಳವಾರ ಶಾಲೆಯ ಶಿಕ್ಷಕರು ಮತ್ತು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ಕೃಷಿಕ ಕುಟುಂಬದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ತಾವು ದಶಕಗಳ ಹಿಂದೆ ಕಂಡಿದ್ದ ನನಸು ಈಗ ನನಸಾಗುತ್ತಿದೆ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆ ಸೇರಿದಂತೆ ಕ್ರೀಡೆ, ವಿಜ್ಞಾನ ವಸ್ತುಪ್ರದರ್ಶನ ಮತ್ತಿತರ ಸಂಗತಿಯಲ್ಲಿ ಶಹರ ಪ್ರದೇಶದ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಖುಷಿ ತಂದಿದೆ ಎಂದು ಅಭಿಪ್ರಾಯಪಟ್ಟರು.ಶಾಲೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮನೀಷಾ ಭೋಸಲೆ ಮಾತನಾಡಿ, ಸಕ್ಷಮ ನಿಲಜಕರ ಶೇ.90.4(ಪ್ರಥಮ), ನಮೃತಾ ಪಾಟೀಲ ಶೇ.88.8 (ದ್ವಿತೀಯ), ರುಮಾಂಜಿಯಾ ಬಾಗವಾನ ಮತ್ತು ಶಶಾಂಕ ಪತ್ತಾರ ಶೇ.88 (ತೃತೀಯ) ರಷ್ಟು ಅಂಕ ಪಡೆದಿದ್ದಾರೆ. 60 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಮತ್ತು 40 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಸ್ವಾತಿಕಮಲ ವಾಳ್ವೆ, ಶಾಲೆಯ ಗವರ್ನಿಂಗ್ ಸಮಿತಿ ಅಧ್ಯಕ್ಷ ಭರತ ತೋಪಿನಕಟ್ಟಿ, ಕಾರ್ಯದರ್ಶಿ ಆರ್.ಎಸ್.ಪಾಟೀಲ ಹಾಗೂ ಇತರರು ಇದ್ದರು.