ಸಾರಾಂಶ
ಸಮೀಪದ ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿ ಸಮೀಪ ಕಳೆದ ಮೂರು ದಿನಗಳ ಹಿಂದೆ ನಿರ್ಮಿಸಿದ್ದ ಶೆಡ್ಗಳನ್ನು ಅರಣ್ಯ ಇಲಾಖಾ ಸಿಬ್ಬಂದಿ ತೆರವುಗೊಳಿಸಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸಮೀಪದ ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿ ಸಮೀಪ ಕಳೆದ ಮೂರು ದಿನಗಳ ಹಿಂದೆ ನಿರ್ಮಿಸಿದ್ದ ಶೆಡ್ಗಳನ್ನು ಅರಣ್ಯ ಇಲಾಖಾ ಸಿಬ್ಬಂದಿ ತೆರವುಗೊಳಿಸಿದ ಘಟನೆ ನಡೆಯಿತು.ಚೌಡ್ಲು ಗ್ರಾಮ ಪಂಚಾಯಿತಿಗೆ ಸೇರಿದ ಅಯ್ಯಪ್ಪ ಕಾಲೋನಿಯಲ್ಲಿರುವ ಸರ್ವೆ ನಂ. 56/1ರಲ್ಲಿನ ಜಾಗ ಅರಣ್ಯ ಇಲಾಖೆ-ಗ್ರಾಮಸ್ಥರು ಎಂದು ಆರ್ಟಿಸಿಯಲ್ಲಿ ಬರುತ್ತಿದ್ದು, ಈ ಜಾಗದಲ್ಲಿ ಸ್ಥಳೀಯರಾದ ಕಿಟ್ಟು ಹಾಗೂ ವಸಂತ್ ಎಂಬವರು ಶೆಡ್ಗಳನ್ನು ನಿರ್ಮಿಸಿ ವಾಸಕ್ಕೆ ಮುಂದಾಗಿದ್ದರು.ಈ ಬಗ್ಗೆ ಮಾಹಿತಿ ಪಡೆದ ಡಿಸಿಎಫ್ ಅಭಿಷೇಕ್, ಎಸಿಎಫ್ ಗೋಪಾಲ್, ಆರ್ಎಫ್ಓ ಶೈಲೇಂದ್ರಕುಮಾರ್, ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ, ಶೆಡ್ ನಿರ್ಮಿಸುತ್ತಿರುವ ಜಾಗ ಅರಣ್ಯಕ್ಕೆ ಸೇರಿದ್ದು, ಇಲ್ಲಿ ಅತಿಕ್ರಮಣ ಮಾಡಬಾರದು ಎಂದರು.ಅರಣ್ಯ ಜಾಗದ ಅತಿಕ್ರಮಣವಾದರೆ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅರಣ್ಯ ಇಲಾಖೆಯ ಸಿಬ್ಬಂದಿ, ಎರಡು ಶೆಡ್ಗಳನ್ನು ತೆರವುಗೊಳಿಸಿದರು. ಕಳೆದ ಮೂರು ದಿನಗಳಿಂದ ಈ ಜಾಗದಲ್ಲಿ ಶೆಡ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಇಂದು ಕೆಲವರು ಉಳಿದ ಜಾಗದಲ್ಲಿ ಕಾಡು ಕಡಿದು ಶೆಡ್ ನಿರ್ಮಿಸಿಕೊಳ್ಳಲು ಮುಂದಾದ ಸಂದರ್ಭ ಅಧಿಕಾರಿಗಳು ತಡೆಯೊಡ್ಡಿದರು.