ಚನ್ನಪಟ್ಟಣ ಉಪಚುನಾವಣೆ : ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಹರಕೆ ಕಟ್ಟಿದ ಶೀಲಾ ಯೋಗೇಶ್ವರ್

| Published : Nov 11 2024, 01:08 AM IST / Updated: Nov 11 2024, 09:48 AM IST

ಸಾರಾಂಶ

ಬೆಳಗ್ಗೆ 8 ಗಂಟೆ ಸುಮಾರಿಗೆ ಏಕಾಂಗಿಯಾಗಿ ಆಗಮಿಸಿದ ಶೀಲಾ ಯೋಗೇಶ್ವರ್, ದೇಗುಲದ ಆವರಣದಲ್ಲಿ ಪುರೋಹಿತರಾದ ಏರಿ ನಾಗರಾಜು ನೇತೃತ್ವದಲ್ಲಿ ವಾಯುಸ್ತುತ್ ಪುನಶ್ಚರನ ಹೋಮದೊಂದಿಗೆ ಪೂರ್ಣಾಹುತಿ ಅರ್ಪಿಸಿದರು.

ಮದ್ದೂರು: ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವಿಗೆ ಪ್ರಾರ್ಥಿಸಿ ಪತ್ನಿ ಶೀಲಾ ಪಟ್ಟಣದ ಪುರಾಣ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಭಾನುವಾರ ಹೋಮ, ಹವನಾದಿಗಳನ್ನು ನೆರವೇರಿಸಿದರು. ಬೆಳಗ್ಗೆ 8 ಗಂಟೆ ಸುಮಾರಿಗೆ ಏಕಾಂಗಿಯಾಗಿ ಆಗಮಿಸಿದ ಶೀಲಾ ಯೋಗೇಶ್ವರ್, ದೇಗುಲದ ಆವರಣದಲ್ಲಿ ಪುರೋಹಿತರಾದ ಏರಿ ನಾಗರಾಜು ನೇತೃತ್ವದಲ್ಲಿ ವಾಯುಸ್ತುತ್ ಪುನಶ್ಚರನ ಹೋಮದೊಂದಿಗೆ ಪೂರ್ಣಾಹುತಿ ಅರ್ಪಿಸಿದರು.

ಉಪಚುನಾವಣೆಯಲ್ಲಿ ಪತಿ ಯೋಗೇಶ್ವರ್ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲಿ ಹಾಗೂ ಆರೋಗ್ಯವಂತರಾಗಿರಲಿ ಎಂದು ಪ್ರಾರ್ಥನೆ ಸಲ್ಲಿಸಿದ ಅವರು, ಹೊಳೆ ಆಂಜನೇಯಸ್ವಾಮಿ ಮೂಲ ವಿಗ್ರಹದ ಎದುರು ತಮ್ಮ ಎರಡು ಹಸ್ತದಲ್ಲಿ ಒಂದು ಕಾಲು ರುಪಾಯಿ ನಾಣ್ಯಗಳನ್ನು ಹಿಡಿದು ಯೋಗೇಶ್ವರ್ ಗೆದ್ದರೆ ಫಲಿತಾಂಶದ ನಂತರ ಮತ್ತೆ ದೇಗುಲಕ್ಕೆ ಆಗಮಿಸಿ ದರ್ಶನ ಪಡೆದು ಹರಕೆ ತೀರಿಸುವುದಾಗಿ ಕೋರಿಕೊಂಡರು.

ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದದೊಂದಿಗೆ ಭೋಜನ ಸ್ವೀಕರಿಸಿದರು. ಪ್ರಧಾನ ಅರ್ಚಕ ಪ್ರದೀಪ ಆಚಾರ್ಯ ಶೀಲಾ ಯೋಗೇಶ್ವರ ಅವರಿಗೆ ದೇಗುಲದ ವತಿಯಿಂದ ಶೇಷ ವಸ್ತ್ರ ಪ್ರಧಾನ ಮಾಡಿ ಗೌರವಿಸಿದರು.