ಶೆಟ್ಟರ್ ಬಿಜೆಪಿಗೆ: ಕಾಂಗ್ರೆಸ್‌ಗೆ ಹಾನಿಯಿಲ್ಲ: ಸಚಿವ ಡಾ.ಶರಣಪ್ರಕಾಶ ಪಾಟೀಲ್

| Published : Jan 27 2024, 01:17 AM IST

ಶೆಟ್ಟರ್ ಬಿಜೆಪಿಗೆ: ಕಾಂಗ್ರೆಸ್‌ಗೆ ಹಾನಿಯಿಲ್ಲ: ಸಚಿವ ಡಾ.ಶರಣಪ್ರಕಾಶ ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷವನ್ನು ಜಗದೀಶ ಶೆಟ್ಟರ್ ಬಿಡುವುದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗಲ್ಲ. ಬಿಜೆಪಿ ಪಕ್ಷ ತೊರೆದು ಪಕ್ಷಕ್ಕೆ ಬಂದಾಗ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಗೌರವದಿಂದ ನಡೆದುಕೊಳ್ಳಲಾಗಿದೆ ಎಂದು ಪಾಟೀಲ್‌ರು ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಮಾಜಿ ಸಿಎಂ, ಎಂಎಲ್ಸಿ ಜಗದೀಶ ಶೆಟ್ಟರ್‌ ಬಿಜೆಪಿಗೆ ಮರಳಿದ್ದರಿಂದ ಕಾಂಗ್ರೆಸ್‌ಗೆ ಯಾವುದೇ ಹಾನಿಯಾಗಲ್ಲ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

ಸ್ಥಳೀಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಜಗದೀಶ ಶೆಟ್ಟರ್ ಬಿಡುವುದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗಲ್ಲ. ಬಿಜೆಪಿ ಪಕ್ಷ ತೊರೆದು ಪಕ್ಷಕ್ಕೆ ಬಂದಾಗ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಗೌರವದಿಂದ ನಡೆದುಕೊಳ್ಳಲಾಗಿದೆ. ಈಗ ಪಕ್ಷ ಬಿಟ್ಟು ವಾಪಸ್ ಬಿಜೆಪಿ ಪಕ್ಷಕ್ಕೆ ಹೋಗಿರುವುದು ಅವರ ವೈಯಕ್ತಿಕ ವಿಚಾರ. ನಮ್ಮ ಪಕ್ಷವನ್ನು ಯಾರೇ ಬಿಟ್ಟರೂ ಹಾನಿಯಾಗುವುದಿಲ್ಲವೆಂದರು.

ರಾಜ್ಯದ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ ಸೇರಿ ಅನೇಕ ಬಿಜೆಪಿ ನಾಯಕರಿಗೆ ಬುದ್ಧಿ ಬಂದಿಲ್ಲ. ಕಾಂಗ್ರೆಸ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ದೂರಿದ ಅವರು, ಬಿಜೆಪಿಯವರಿಗೆ ಜನರ ಹತ್ತಿರ ಹೋಗಲು ಮುಖವಿಲ್ಲ. ರಾಜ್ಯದ ಜನ ಬುದ್ಧಿವಂತರು. ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.

ರಾಮ ಮಂದಿರ ನಿರ್ಮಿಸಿದರೆ, ರಾಮರಾಜ್ಯ ನಿರ್ಮಾಣವಾಗುವುದಿಲ್ಲ. ಭ್ರಷ್ಟಾಚಾರ, ಪಾರದರ್ಶಕ ಆಡಳಿತ, ಬಡ ಜನರಹಿತಕ್ಕೆ ಕೆಲಸ ಮಾಡಿದರೆ ರಾಮರಾಜ್ಯವಾಗಲಿದೆ. ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ದೊರಕಿದಾಗ ಶೇ.40 ಪರ್ಸೆಂಟ್ ಕಮಿಷನ್ ಆಡಳಿತ ನಡೆಸಿ ನಡೆಸಿದ್ದರಿಂದ ಆಡಳಿತ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೊಣೆ ನೀಡಲಾಗಿದೆ. ಇದು ಪಕ್ಷದ ನಿರ್ಣಯವಾಗಿದೆ. ಜಿಲ್ಲೆಯಲ್ಲಿ ಕೆಲ ವಿಚಾರದಲ್ಲಿ ಭಿನ್ನಾಭಿಪ್ರಾಯವಿರಬಹುದು ಬಣ ರಾಜಕೀಯ. ಒಳ ಜಗಳವಿಲ್ಲ. ಪಕ್ಷದ ನಾಯಕರು ಶೀಘ್ರವೇ ಜಿಲ್ಲಾ ಘಟಕಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ. ನಿಗಮ ಮಂಡಳಿಗಳಿಗೂ ಸರ್ಕಾರ ಶೀಘ್ರವೇ ನೇಮಕ ನಡೆಯಲಿದೆ ಎಂದು ವಿವರಿಸಿದರು.

ಇಂಡಿಯಾ ಮೈತ್ರಿಕೂಟದಿಂದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷವು ಹೊರಗೆ ಹೋಗಿಲ್ಲ. ಸ್ಥಾನ ಹಂಚಿಕೆಯಲ್ಲಿ ಗೊಂದಲವಾಗಿದೆ. ಸರಿಪಡಿಸಿಕೊಳ್ಳುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿಯೇ ಮೈತ್ರಿಕೂಟ ಮುನ್ನೆಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಬಸನಗೌಡ ದದ್ದಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಮುಖಂಡರಾದ ಕೆ.ಶಾಂತಪ್ಪ, ಮೊಹಮ್ಮದ ಶಾಲಂ ಇದ್ದರು.