ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶಿರ್ವ ಮಹಿಳಾ ಮಂಡಲದ ವತಿಯಿಂದ ಮಹಿಳಾ ಸೌಧದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ ಮೂರು ದಿನಗಳ ‘ಚಿಣ್ಣರು-೨೦೨೫’ ಉಚಿತ ಬೇಸಿಗೆ ಶಿಬಿರವನ್ನು ಇತ್ತೀಚೆಗೆ ಶಿರ್ವದ ಉದ್ಯಮಿ ಹಾಗೂ ಸಮಾಜ ಸೇವಕ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣ ಹಾಗೂ ವ್ಯಕ್ತಿತ್ವದ ವಿಕಸನಕ್ಕೆ ಇಂತಹ ಶಿಬಿರಗಳು ಸ್ಫೂರ್ತಿ ನೀಡುತ್ತವೆ. ಶಿರ್ವ ಮಹಿಳಾ ಮಂಡಲ ಹಲವು ದಶಕಗಳಿಂದ ಈ ಪರಿಸರದಲ್ಲಿ ಸಂಘಟನೆಯ ಜೊತೆಗೆ ಅತ್ಯುತ್ತಮ ಸಮಾಜಮುಖಿ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಪೀಟರ್ ಕೋರ್ಡ, ಹಸನ್ ಇಬ್ರಾಹಿಂ ಭಾಗವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಲ ಅಧ್ಯಕ್ಷೆ ಡಾ. ಸ್ಫೂರ್ತಿ ಪಿ. ಶೆಟ್ಟಿ ವಹಿಸಿ ಮಹಿಳಾ ಮಂಡಲದ ಕಾರ್ಯಕ್ರಮಗಳಿಗೆ ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.ವೇದಿಕೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಠಲ್ ಅಂಚನ್, ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ವನಿತಾ ಕೆ. ಶೆಣೈ, ಕೋಶಾಧಿಕಾರಿ ದೀಪಾ ಶೆಟ್ಟಿ ಉಪಸ್ಥಿತರಿದ್ದರು. ಗೌರವ ಸಲಹೆಗಾರರಾದ ಬಂಟಕಲ್ಲು ಗೀತಾ ವಾಗ್ಲೆ ಸ್ವಾಗತಿಸಿದರು. ಮಾಲತಿ ಅನಂತ ಮೂಡಿತ್ತಾಯ ಪರಿಚಯಿಸಿದರು. ಜಯಶ್ರೀ ಜಯಪಾಲ್ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಐರಿನ್ ಪಿಂಟೊ ವಂದಿಸಿದರು. ಶಿಬಿರದಲ್ಲಿ ೮೦ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.