ಸಾರಾಂಶ
ಗುಳೇದಗುಡ್ಡ: ತಾಲೂಕು ಆಡಳಿತದ ಅಶ್ರಯದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಂಗಳಾ ಎಂ. ಮಾತನಾಡಿ, ಶಿವಾಜಿ ಮಹಾರಾಜರು ಹಿಂದು ಸಾಮ್ರಾಜ್ಯವನ್ನು ಕಟ್ಟುವಲ್ಲಿ ತೋರಿದ ಸಾಹಸ, ಶೌರ್ಯ ಭಾರತೀಯ ಇತಿಹಾಸದಲ್ಲಿ ಅಜರಾಮರ ಎಂದರು.
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಸಾಮ್ರಾಜ್ಯ ಕಟ್ಟುವಲ್ಲಿ ಮತ್ತು ದೇಶದ ಸಂರಕ್ಷಣೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ಮತ್ತು ಸಾಹಸ ಮರೆಯಲು ಸಾಧ್ಯವಿಲ್ಲ. ಇಂದಿನ ಯುವಕರಿಗೆ ಅವರ ಜೀವನ ಮತ್ತು ಸಾಧನೆ ಸ್ಫೂರ್ತಿ ಎಂದು ತಹಸೀಲ್ದಾರ್ ಮಂಗಳಾ ಎಂ. ಹೇಳಿದರು.ತಾಲೂಕು ಆಡಳಿತದ ಅಶ್ರಯದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಜರುಗಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವಾಜಿ ಮಹಾರಾಜರು ಹಿಂದು ಸಾಮ್ರಾಜ್ಯವನ್ನು ಕಟ್ಟುವಲ್ಲಿ ತೋರಿದ ಸಾಹಸ, ಶೌರ್ಯ ಭಾರತೀಯ ಇತಿಹಾಸದಲ್ಲಿ ಅಜರಾಮರ. ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರ ದೇಶಪ್ರೇಮ, ಪ್ರಜಾಪ್ರೇಮ, ಶೌರ್ಯ, ಸಾಹಸಗಳನ್ನು ಇಂದಿನ ಯುವಪೀಳಿಗೆ ಅರಿತು ಆದರ್ಶ ಬದುಕನ್ನು ಕಟ್ಟಿಕೊಳ್ಳಬೇಕೆಂದರು.
ಮಹಾದೇವ ಜಗತಾಪ ಮಾತನಾಡಿದರು. ತಹಸೀಲ್ದಾರ್ ಮಂಗಳಾ ಎಂ. ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಸುಭಾಸ ಬೊಂಬಲೇಕರ, ಸುದರ್ಶನ ಹಂಚಾಟಿ, ರವಿ ದೇವಗಿರಿಕರ, ನಾರಾಯಣ ಸುಲಾಖೆ, ಚಂದ್ರಕಾಂತ ಮಹೇಂದ್ರಕರ್, ಅನೀಲ ಮಹೇಂದ್ರಕರ್, ವಿಠ್ಠಲ ಅಂಬೋರೆ, ಜ್ಞಾನೇಶ ಮಹೇಂದ್ರೇಕರ, ಜ್ಞಾನೇಶ ಬೊಂಬಲೇಕರ ಇತರರು ಇದ್ದರು.