ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಸಂಯುಕ್ತ ಆಶ್ರಯದಲ್ಲಿ ನಗರದ ಉರ್ವಸ್ಟೋರ್‌ನಲ್ಲಿರುವ ತುಳುಭವನದಲ್ಲಿ ಬುಧವಾರ ಶಿವಯೋಗಿ ಸಿದ್ದರಾಮ ಜಯಂತಿ

ಮಂಗಳೂರು: ಶಿವಯೋಗಿ ಸಿದ್ದರಾಮರ ವಚನಗಳು ಜ್ಞಾನದ ಸಂದೇಶಗಳನ್ನು ಒಳಗೊಂಡಿವೆ. ವಚನಕಾರರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು. ಇಂತಹ ಜಯಂತಿ ಆಚರಣೆ ಸಂದರ್ಭಗಳಲ್ಲಿ ಮಕ್ಕಳಿಗೆ ವಚನಕಾರರ ಆದರ್ಶ, ತತ್ವಗಳನ್ನು ತಿಳಿಸಿಕೊಡುವ ಅಗತ್ಯವಿದೆ ಎಂದು ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಸಂಯುಕ್ತ ಆಶ್ರಯದಲ್ಲಿ ನಗರದ ಉರ್ವಸ್ಟೋರ್‌ನಲ್ಲಿರುವ ತುಳುಭವನದಲ್ಲಿ ಬುಧವಾರ ಶಿವಯೋಗಿ ಸಿದ್ದರಾಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಏಳಿಗೆಗಾಗಿ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು 12ನೇ ಶತಮಾನದ ಶಿವಯೋಗಿ ಸಿದ್ದರಾಮ ಅವರು ಅಂದಿನ ಕಾಲಘಟ್ಟದಲ್ಲಿಯೇ ರೂಪಿಸಿದ್ದಾರೆ ಎಂದರು.ಮಂಗಳೂರು ವಿವಿ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ಸೋಮಣ್ಣ ಉಪನ್ಯಾಸ ನೀಡಿ, ಶಿವಯೋಗಿ ಸಿದ್ದರಾಮ ಅವರ ಜೀವನ ಕ್ರಮವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. 12ನೇ ಶತಮಾನದ ಮಹಾನ್ ವಚನಕಾರರಲ್ಲಿ ಸಿದ್ದರಾಮ ಕೂಡ ಒಬ್ಬರಾಗಿದ್ದು, ಬಾಲ್ಯದಲ್ಲಿ ಅವರು ಚಾಣಾಕ್ಷ ಅಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ದನ ಮೇಯಿಸಲು ಕಳುಹಿಸಿದ್ದರು. ಇವರು ಶ್ರೀಶೈಲಕ್ಕೆ ಹೋಗಿ ಬಂದ ಬಳಿಕ ಜ್ಞಾನಿಯಾಗಿ ಜನಪರ ಕೆಲಸಗಳನ್ನು ಮಾಡಿದ್ದಾರೆ. ಕಾಯಕವನ್ನು ದೇವರೆಂದು ಭಾವಿಸಿ, ತಮ್ಮ ಕೆಲಸಗಳಲ್ಲಿ ದೇವರನ್ನು ಕಂಡ ಅವರ ಚರಿತ್ರೆಗಳನ್ನು ಓದಿ ಅವರ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ, ಸದಸ್ಯೆ ಜ್ಯೋತಿ ಮತ್ತಿತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ವಾರುಣಿ ನಾಗರಾಜ್ ನಿರೂಪಿಸಿ, ವಂದಿಸಿದರು.