ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ.ಶೃತಿ ಬಲ್ಲಾಳ್ ಅವರು ಫಿಲಿಫೈನ್ಸ್ನ ಮಾನಿಲಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರತಿಷ್ಠಿತ ಮಿಸೆಸ್ ಅರ್ಥ್ ಇಂಟರ್ನ್ಯಾಶನಲ್ ಟೂರಿಸಂ-2024 ಕಿರೀಟ ಗೆದ್ದುಕೊಂಡಿದ್ದಾರೆ.ಈ ಬಗ್ಗೆ ಸ್ವತಃ ಶೃತಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.ಮಂಗಳೂರಿನ ಪಾತ್ವೇ ಎಂಟರ್ಪ್ರೈಸಸ್ನಿಂದ ಸೌಂದರ್ಯ ಸ್ಪರ್ಧೆಗೆ ತಾವು ಕಾಲಿಟ್ಟಿದ್ದು, ಮಂಗಳೂರು ವಲಯ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಗೆದ್ದುಕೊಂಡೆ. ನಂತರ ಬೆಂಗಳೂರಿನಲ್ಲಿ ಆಗಸ್ಟ್ನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ ಅರ್ಥ್ ಇಂಟರ್ನ್ಯಾಶನಲ್ ಪ್ರಶಸ್ತಿಯನ್ನು ಗೆದ್ದು, ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದೆ.ನಂತರ ಮನಿಲಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯು ಬಹಳ ಸವಾಲಿನದ್ದಾಗಿತ್ತು. ಇಲ್ಲಿ 10 ದಿನಗಳ ಕಾಲ ನಡೆದ ಸೌಂದರ್ಯದ ಜೊತೆಗೆ ಬುದ್ಧಿಮತ್ತೆ, ದಯೆ, ಪರಿಸರದ ಬಗ್ಗೆ ತೋರಿದ ಬದ್ಧತೆಯು ಜ್ಯೂರಿಗಳ ಗಮನ ಸೆಳೆದು ಈ ಪ್ರಶಸ್ತಿಯನ್ನು ಗೆದ್ದುಕೊಂಡೆ ಎಂದರು.ಈ ಪ್ರಶಸ್ತಿಯೊಂದಿಗೆ ತನ್ನನ್ನು 5 ದೇಶಗಳಲ್ಲಿ ಪರಿಸರದ ಬಗ್ಗೆ ಜಾಗೃತಿಗಾಗಿ ಕೆಲಸ ಮಾಡಲು ಆಯ್ಕೆ ಮಾಡಲಾಗಿದೆ ಎಂದವರು ಸಂತಸ ವ್ಯಕ್ತಪಡಿಸಿದರು.ಈ ಅಂತಾರಾಷ್ಟ್ರೀಯ ಸ್ಪರ್ಧೆಗೆ ತನ್ನನ್ನು ಆಸ್ಟ್ರಲ್ ಮಿಸೆಸ್ ಇಂಡಿಯಾದ ಕರ್ನಾಟಕ ನಿರ್ದೇಶಕಿ ಪ್ರತಿಭಾ ಸೌನ್ಶಿಮಠ್ ಮಾರ್ಗದರ್ಶನ ಮಾಡಿದ್ದರು ಎಂದು ಕೃತಜ್ಞತೆ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾತ್ವೇ ಎಂಟರ್ಪ್ರೈಸಸ್ನ ದೀಪಕ್ ಗಂಗೂಲಿ ಮತ್ತು ಮರ್ಸಿ ಬ್ಯೂಟಿ ಅಕಾಡೆಮಿಯ ವೀಣಾ ಡಿಸೋಜ, ಅನಿಷಾ ಮತ್ತು ವಿನ್ಸೆಂಟ್ ಉಪಸ್ಥಿತರಿದ್ದರು.