ಆಶ್ರಯ ಮನೆಗಳ ಹಕ್ಕುಪತ್ರಗಳಿಗಾಗಿ ಆಗ್ರಹಿಸಿ ಅಮ್ಮಿನಬಾವಿಯ ನೂರಾರು ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಧಾರವಾಡ:
ಆಶ್ರಯ ಮನೆಗಳ ಹಕ್ಕುಪತ್ರಗಳಿಗಾಗಿ ಆಗ್ರಹಿಸಿ ತಾಲೂಕಿನ ಅಮ್ಮಿನಬಾವಿಯ ನೂರಾರು ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಹಕ್ಕುಪತ್ರ ಕೊಡುವುದಾಗಿ ತಹಸೀಲ್ದಾರ್ ಕಚೇರಿಯಿಂದ ಪ್ರತಿ ಮನೆಗೆ ಹಣ ತುಂಬಿಸಿಕೊಳ್ಳಲಾಗಿದೆ. ಕಳೆದ ಆರೇಳು ತಿಂಗಳ ಹಿಂದೆ ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿದ ಭೂ ಗ್ಯಾರಂಟಿ ಸಮಾವೇಶದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ರಾಮದ ಪೈಕಿ ಹುಸೇನಸಾಬ್ ಎಂಬುವರಿಗೆ ಮಾತ್ರ ಹಕ್ಕುಪತ್ರ ನೀಡಿದ್ದು, ಇಲ್ಲಿಯ ವರೆಗೂ ಉಳಿದ 476 ಕುಟುಂಬಗಳಿಗೆ ನೀಡಿಲ್ಲವೆಂದು ಫಲಾನುಭವಿಗಳಾದ ಯಲ್ಲವ್ವ ಗಿಡಗುಂಚಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಸಾಧನೆ ಹೇಳಲು ಹಾವೇರಿಯಲ್ಲಿ ದೊಡ್ಡ ಸಮಾವೇಶ ಮಾಡಿದ ಕಾಂಗ್ರೆಸ್ ಸರ್ಕಾರ ಬಡವರಿಗೆ ಹಕ್ಕುಪತ್ರ ನೀಡಲು ವಿಳಂಬ ಮಾಡುತ್ತಿದೆ. ಹಕ್ಕುಪತ್ರ ನೀಡಲು ಶಾಸಕರು ಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದು, ಜಿಲ್ಲಾಧಿಕಾರಿಗಳು ಹಕ್ಕುಪತ್ರ ನೀಡಿದರೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಗ್ರಾಮಸ್ಥರು, ಗ್ರಾಮದಲ್ಲಿಯೇ 470ಕ್ಕೂ ಹೆಚ್ಚು ಜನರು ಹಕ್ಕುಪತ್ರಗಳಿಗೆ ಪರದಾಡುತ್ತಿದ್ದಾರೆ. ಈ ಪತ್ರ ಇಲ್ಲದೇ ನಳ, ವಿದ್ಯುತ್ ಸಂಪರ್ಕ ಸೇರಿದಂತೆ ಸರ್ಕಾರದ ಯಾವ ಸೌಲಭ್ಯಗಳು ಸಿಗದೇ ತೀವ್ರ ಸಮಸ್ಯೆಯಾಗುತ್ತಿದೆ. ಹಕ್ಕುಪತ್ರ ಪಡೆದುಕೊಂಡೇ ತಹಸೀಲ್ದಾರ್ ಕಚೇರಿಯಿಂದ ಮರಳಿ ಹೋಗುತ್ತೇವೆಂದು ಗ್ರಾಮಸ್ಥರು ಮಧ್ಯಾಹ್ನ ವರೆಗೂ ಪಟ್ಟು ಹಿಡಿದು ಕುಳಿತರು.ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆದಷ್ಟು ಶೀಘ್ರದಲ್ಲಿ ಹಕ್ಕುಪತ್ರ ಕೊಡುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟರು.