ಸತತ 51ವರ್ಷಗಳ ಹೋರಾಟಕ್ಕೆ ನ್ಯಾಯ ದೊರಕಿದೆ. ನಮ್ಮ ಸಿಂದಗಿಯ ಗುರುಬಸವ ವಿರಕ್ತಮಠದ ಆಸ್ತಿಯು ಮರಳಿ ಮಠದ ಹೆಸರಿಗಾಗಿದೆ
ಕನ್ನಡಪ್ರಭ ವಾರ್ತೆ ಸಿಂದಗಿ
ಸತತ 51ವರ್ಷಗಳ ಹೋರಾಟಕ್ಕೆ ನ್ಯಾಯ ದೊರಕಿದೆ. ನಮ್ಮ ಸಿಂದಗಿಯ ಗುರುಬಸವ ವಿರಕ್ತಮಠದ ಆಸ್ತಿಯು ಮರಳಿ ಮಠದ ಹೆಸರಿಗಾಗಿದೆ ಎಂದು ಗುರುಬಸವ ವಿರಕ್ತಮಠದ ಸೇವಾ ಸಮಿತಿಯ ಕಾರ್ಯದರ್ಶಿ ನಿಂಗಪ್ಪ ಗುರುಬಸಪ್ಪ ಪಟ್ಟಣಶೆಟ್ಟಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಸಿಂದಗಿಯ ಗುರುಬಸವ ವಿರಕ್ತಮಠದ ಆಸ್ತಿಯನ್ನು 1974ರಲ್ಲಿ ಅನಧಿಕೃತವಾಗಿ ವಕ್ಫ್ ಬೋರ್ಡ್ ತನ್ನ ಹೆಸರಿಗೆ ಮಾಡಿಕೊಂಡಿತ್ತು. ಇದರ ಬಗ್ಗೆ ಸಾಕಷ್ಟು ಹೋರಾಟ ಮಾಡಿ ಕಳೆದ 2024ರಲ್ಲಿ ರಾಜ್ಯಾದ್ಯಂತ ವಕ್ಫ್ಬೋರ್ಡ್ ವಿರುದ್ಧ ಸಾಕಷ್ಟು ಹೋರಾಟಗಳು ನಡೆದವು. ಆ ಸಂದರ್ಭದಲ್ಲಿ ನಮ್ಮ ಮಠದ 600 ವರ್ಷಗಳ ಇತಿಹಾಸದ ದಾಖಲೆಗಳನ್ನು ಸರ್ಕಾರದ ಮುಂದಿಟ್ಟಾಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳು, ಇಂಡಿ ಉಪವಿಭಾಗಾಧಿಕಾರಿಗಳ ಅವರ ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ವ್ಯಾಜ್ಯ ನಡೆಸಲಾಯಿತು.ಈ ಪ್ರಕರಣದಲ್ಲಿ ಪಕ್ಷಗಾರರಾಗಿ ಸಿಂದಗಿ ವಿರಕ್ತಮಠ ಸೇವಾ ಸಮಿತಿ ವಿರಕ್ತಮಠ ಸಿಂದಗಿ (ಬಿಳೂರ) ಗೌರವಾಧ್ಯಕ್ಷ ಗುರುಬಸವ ಚನ್ನಬಸವ ಮಹಾಸ್ವಾಮಿಗಳು ಪ್ರಕರಣದಲ್ಲಿ ಪಾರ್ಟಿಗಳಾಗಿ ಸಿಂದಗಿ ತಹಸೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿ, ವಿಜಯಪುರ ಜಿಲ್ಲಾ ವಕ್ಫ್ಬೋರ್ಡ್ ಆಗಿದ್ದರು. ಈ ಪ್ರಕರಣ 2024ರ ಡಿ.19 ರಂದು ದಾಖಲಾಗಿತ್ತು. ಪ್ರಕರಣ ಸತತ 11 ತಿಂಗಳಿನಿಂದ ವಾದಿ, ಪ್ರತಿವಾದಗಳು ನಡೆದು ಕೊನೆಗೆ 2025ರ ನ.28 ರಂದು ಈ ವಿರಕ್ತಮಠದ ಆಸ್ತಿಯನ್ನು ವಕ್ಫ್ಬೋರ್ಡ್ನಿಂದ ಮುಕ್ತಗೊಳಿಸಿ ಶ್ರೀಮಠದ ಆಸ್ತಿಯನ್ನು ಮರಳಿ ಮಠಕ್ಕೆ ಸಂಬಂಧಿಸಿದ ಆಸ್ತಿ ಈ ಆಸ್ತಿಗೂ ವಕ್ಫಬೋರ್ಡ್ಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ ಎಂದು ತಿಳಿಸಿದ್ದಾರೆ.