ಸಾರಾಂಶ
ಶಿರಸಿ: ಮಹಿಳೆಯರ ಆರ್ಥಿಕ ನಿರ್ವಹಣಾ ಬಲವನ್ನು ಹೆಚ್ಚಿಸುವ ಮೂಲಕ ಕುಟುಂಬದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಹೇಳಿದರು.ಅವರು ಶನಿವಾರ ನಗರದ ರಂಗಧಾಮದಲ್ಲಿ ನಡೆದ ಸ್ಕೊಡ್ವೆಸ್ ಮಹಿಳಾ ಸೌಹಾರ್ದ ಸಹಕಾರಿಯ 10ನೇ ಸರ್ವ ಸಾಧಾರಣ ಸಭೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿಗೂ ಬಡ ಹಾಗೂ ಮಧ್ಯಮ ವರ್ಗದ ಹೆಚ್ಚಿನ ಕುಟುಂಬಗಳಲ್ಲಿ ಮಹಿಳೆಯರೇ ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುತ್ತಿರುವುದರಿಂದ ತಮ್ಮ ಆರ್ಥಿಕ ಸ್ವಾವಲಂಬನೆಗೆ ಸ್ವ-ಸಹಾಯ ಸಂಘ ಹಾಗೂ ಸೌಹಾರ್ದ ಸಹಕಾರಿ ಸಂಸ್ಥೆಗಳನ್ನು ರಚಿಸಿಕೊಂಡಿರುವುದು ಅಭಿನಂದನಾರ್ಹ ಎಂದರು.ಸಾಧಕರಿಗೆ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದವರಿಗೆ ಸನ್ಮಾನಿಸಿ ಡಿವೈಎಸ್ಪಿ ಗೀತಾ ಪಾಟೀಲ್ ಮಾತನಾಡಿ, ಬದುಕಿನ ಸವಾಲುಗಳು ವಿಶ್ವವಿದ್ಯಾಲಯದ ಪಾಠಕ್ಕಿಂತಲೂ ಅಧಿಕ ಅನುಭವ ನೀಡುತ್ತವೆ. ಬಡತನದಿಂದ ಹೊರಗೆ ಬರಲು ಹೋರಾಡುವವನಿಗೆ ಮಾತ್ರ ಪ್ರಪಂಚದ ಅವಕಾಶಗಳ ಪರಿಚಯವಾಗುತ್ತದೆ. ಮಹಿಳೆಯರು ಕಷ್ಟ, ಬಡತನ ಎಂದು ಯೋಚಿಸುತ್ತಾ ಇರುವ ಬದಲು ಲಭ್ಯವಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹಕಾರಿಯ ಅಧ್ಯಕ್ಷೆ ಸರಸ್ವತಿ ಎನ್.ರವಿ ಸಂಸ್ಥೆ ನಡೆದು ಬಂದ ದಾರಿ ಹಾಗೂ ಹಮ್ಮಿಕೊಂಡ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಪ್ರಾಮಾಣಿಕ ಸೇವೆ ಹಾಗೂ ಸದಸ್ಯರ ಆಶಯಕ್ಕೆ ತಕ್ಕಂತೆ ವ್ಯವಹಾರಗಳನ್ನು ನಡೆಸಿ 2024-25 ನೇ ಸಾಲಿನಲ್ಲಿ ₹55.90 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು. ಲಾಭ ಘೋಷಣೆ ಮಾಡಿದ ಸರಸ್ವತಿಯವರು ಸದಸ್ಯರಿಗೆ ಶೇ.12 ರಷ್ಟು ಡಿವಿಡೆಂಡ್ ಘೋಷಣೆ ಮಾಡಿದರು.ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮಾತನಾಡಿದರು. ಸಂಘದ ನಿರ್ದೇಶಕರಾದ ಗೀತಾ ಹಣಬರ್, ವೀಣಾ ಮೊಗೇರ್, ಮಾಲಿನಿ ನಾಯ್ಕ, ಸರೋಜಾ ಗಂಗೊಳ್ಳಿ, ಲಕ್ಷ್ಮೀ ಕೆ., ಲಲಿತಾ ಹೆಗಡೆ, ಭಾಗೀರಥಿ ನಾಯ್ಕ, ಸ್ವಾತಿ ಶೆಟ್ಟಿ, ಪೂರ್ಣಿಮಾ ಪಾಟೀಲ್ ಇದ್ದರು.
ಕಾರ್ಯಕ್ರಮದಲ್ಲಿ ಉತ್ತರ ಕನ್ನಡ, ಹಾವೇರಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕಾರ್ಯಕ್ರಮಾಧಿಕಾರಿ ಡಾ. ನಾರಾಯಣ ಹೆಗಡೆ ನಿರೂಪಿಸಿದರು. ನಿರ್ದೇಶಕಿ ಮಾಲಿನಿ ನಾಯ್ಕ ವಂದಿಸಿದರು.