ಕೃತಕ ಪ್ರವಾಹಕ್ಕೆ ಸ್ಮಾರ್ಟ್‌ಸಿಟಿ ಅವೈಜ್ಞಾನಿಕ ಕಾಮಗಾರಿ ಕಾರಣ: ಪದ್ಮರಾಜ್‌

| Published : Jun 03 2025, 01:58 AM IST

ಕೃತಕ ಪ್ರವಾಹಕ್ಕೆ ಸ್ಮಾರ್ಟ್‌ಸಿಟಿ ಅವೈಜ್ಞಾನಿಕ ಕಾಮಗಾರಿ ಕಾರಣ: ಪದ್ಮರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸಿದ್ದೇ ಕೃತಕ ಪ್ರವಾಹ ಸೃಷ್ಟಿಗೆ ಕಾರಣ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 5 ವರ್ಷ ಆಡಳಿತ ನಡೆಸಿದೆ. ಈ ಕುರಿತು ವಿಮರ್ಶೆ ಮಾಡಿ, ವ್ಯವಸ್ಥೆಯನ್ನು ಸರಿಪಡಿಸುವುದು ಬಿಟ್ಟು ಸ್ಥಳೀಯ ಶಾಸಕರು ರಾಜ್ಯ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸಿದ್ದೇ ಕೃತಕ ಪ್ರವಾಹ ಸೃಷ್ಟಿಗೆ ಕಾರಣ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 5 ವರ್ಷ ಆಡಳಿತ ನಡೆಸಿದೆ. ಈ ಕುರಿತು ವಿಮರ್ಶೆ ಮಾಡಿ, ವ್ಯವಸ್ಥೆಯನ್ನು ಸರಿಪಡಿಸುವುದು ಬಿಟ್ಟು ಸ್ಥಳೀಯ ಶಾಸಕರು ರಾಜ್ಯ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಆಸ್ತಿಪಾಸ್ತಿ ನಷ್ಟದ ಜತೆಗೆ ಪ್ರಾಣಹಾನಿಯಾಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶದನ ಮೇರೆಗೆ ಉಸ್ತುವಾರಿ ಸಚಿವರು ಪರಿಹಾರ ನೀಡುವ ಕಾರ್ಯ ನೆರವೇರಿಸಿದ್ದಾರೆ. ಇಂತಹ ವಿಕೋಪದ ಸಂದರ್ಭದಲ್ಲಿ ಶಾಸಕರು ಜನರ ಹಿತದೃಷ್ಟಿಯಿಂದ ಸರ್ಕಾರಕ್ಕೆ ಬೆಂಬಲ ನೀಡಬೇಕೇ ಹೊರತು ಟೀಕೆ ಮಾಡುವುದು ಸಲ್ಲದು ಎಂದರು.

ವಿಕೋಪ ನೆರವಿಗೆ ಕಾಂಗ್ರೆಸ್‌ ತಂಡ:

ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಸರ್ಕಾರ ಸೂಕ್ತ ಪರಿಹಾರ ನೀಡುತ್ತಿದೆ. ನಾಪತ್ತೆಯಾಗಿರುವ ಮೀನುಗಾರರ ಕುಟುಂಬದ ಜತೆ ಸರ್ಕಾರ ಸಂಪರ್ಕದಲ್ಲಿದೆ. ಮೂಡುಬಿದಿರೆಯಲ್ಲಿ ಸೇತುವೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಈ ಬಗ್ಗೆಯೂ ತಕ್ಷಣ ಸ್ಪಂದಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳ ಸಂದರ್ಭ ನೆರವಾಗಲು ಪಕ್ಷದ ಕಾರ್ಯಕರ್ತರ ತಂಡ ಸಿದ್ಧಪಡಿಸಲಾಗಿದೆ ಎಂದು ಪದ್ಮರಾಜ್‌ ತಿಳಿಸಿದರು.

ಕೊಲೆ ಖಂಡನೀಯ:

ಕೊಲೆ ಸುಹಾಸ್‌ ಶೆಟ್ಟಿಯದ್ದಾಗಿರಲಿ, ರೆಹಮಾನ್ ಆಗಿರಲಿ ದ.ಕ. ಜಿಲ್ಲೆ ತಲೆ ತಗ್ಗಿಸುವ ವಿಚಾರ. ಅಬ್ದುಲ್ ರಹಿಮಾನ್ ವಿಚಾರದಲ್ಲಿ ಯಾವುದೇ ಅಪರಾಧ ಹಿನ್ನೆಲೆ ಹೊಂದಿರದ, ಸೌಹಾರ್ದತೆಯಿಂದ ಇದ್ದ ಅಮಾಯಕ ವ್ಯಕ್ತಿಯನ್ನು ಜತೆಯಲ್ಲಿದ್ದವರೇ ಕೊಲೆ ಮಾಡಿರುವುದು ಖಂಡನೀಯ. ರಾಜಕಾರಣಿಗಳು ತಮ್ಮ ಪ್ರಚೋದನೆಗಳಿಂದ ಆಗುವ ಅನಾಹುತಗಳನ್ನು ತಮ್ಮದೇ ಕುಟುಂಬಕ್ಕೆ ಹೋಲಿಕೆ ಮಾಡಿ ವಿಮರ್ಶೆ ಮಾಡಿಕೊಳ್ಳಲಿ ಎಂದು ಪದ್ಮರಾಜ್‌ ಸಲಹೆ ನೀಡಿದರು.

ಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಸುಹಾನ್ ಆಳ್ವ, ದಿನೇಶ್ ಮೂಳೂರು, ಅಪ್ಪಿ, ನೀರಜ್‌ಪಾಲ್, ಟಿ. ಹೊನ್ನಯ್ಯ, ಪ್ರೇಮ್ ಬಳ್ಳಾಲ್‌ಬಾಗ್ ಇದ್ದರು.