ಕನ್ನಡಪ್ರಭ ವಾರ್ತೆ ತ್ಯಾಗರ್ತಿ
ಸಾಗರ ತಾಲೂಕು ಬಿಳಿಸಿರೆ ಗ್ರಾಮದಲ್ಲಿ ಬಹಿಷ್ಕಾರದ ಕೂಗು ಕೇಳಿ ಬಂದಿದ್ದು ಬುಧವಾರ ತಹಸೀಲ್ದಾರ್ ಪ್ರದೀಪ್ ನಿಕ್ಕಂ, ವಿ.ಎ.ರವಿಚಂದ್ರನ್, ಪಡವಗೋಡು ಗ್ರಾಮ ಪಂಚಾಯಿತಿ ಪಿಡಿಒ ಉಲ್ಲಾಸ್, ಆರ್.ಐ.ಗುರುರಾಜ್, ಮಹಿಳಾ ಸಾಂತ್ವನ ಕೇಂದ್ರದ ಸುಚಿತ್ರಾ, ಈ.ಒ.ಮೌನೇಶ್ ಬಡಿಗೇರ್, ಸಮಾಜಕಲ್ಯಾಣ ಇಲಾಖೆಯ ಸುರೇಶ್, ಯುವ ಸಂಘಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಗುರುಮೂರ್ತಿ ಗುತ್ತನಹಳ್ಳಿ ಇವರ ಸಮ್ಮುಖದಲ್ಲಿ ಶಾಂತಿ ಸಭೆ ನೆಡೆಯಿತು.ಬಿಳಿಸಿರಿ ಗ್ರಾಮದ ಕಲಾವತಿ, ಹೇಮಾವತಿ ಮತ್ತು ಗಣಪತಿ, ಸುರೇಂದ್ರ ಎಂಬುವವರಿಗೆ ಗ್ರಾಮದಿಂದ ಬಹಿಷ್ಕಾರ ಕೂಗು ಕೇಳಿದ್ದು, ಗ್ರಾಮ ಸಮಿತಿಯ ವತಿಯಿಂದ ಬಹಿಷ್ಕಾರದ ಅವಮಾನ ತಾಳಲಾರದೆ ಕಲಾವತಿ ಎಂಬ ಮಹಿಳೆ ಏ.27 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಗಣಪತಿ, ಕಲಾವತಿ, ಹೇಮಾವತಿ ಮತ್ತು ಸುರೇಂದ್ರ ದಾಯಾದಿಗಳಾಗಿದ್ದು, ಇವರಲ್ಲಿ ಸುರೇಂದ್ರ ಬಿಳಿಸಿರೆ ಗ್ರಾಮದ ಕಮಿಟಿಯಲ್ಲಿದ್ದು ತಾವು ಬೇರೆ ಗ್ರಾಮಕ್ಕೆ ಹೋಗುವುದಾಗಿ ಹೇಳಿದ ನಂತರ ಈ ನಾಲ್ವರನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ. ಇದರಿಂದ ಮನನೊಂದು ಕಲಾವತಿಯವರು ವಿಷ ಸೇವಿಸಿರುವುದಾಗಿ ಕುಟುಂಬದವರು ಸಭೆಯಲ್ಲಿ ಆರೋಪಿಸಿದ್ದಾರೆ.ಊರಿನ ಕಮಿಟಿಯವರು ಈ ಸಮಸ್ಯೆಯನ್ನು ಬಗೆಹರಿಸಲು ಒಂದು ವಾರ ಸಮಯ ಕೇಳಿದ್ದು ಇದುವರೆಗೂ ಸಮಿತಿ ತೀರ್ಮಾನಿಸಿಲ್ಲ. ಆದ್ದರಿಂದ ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದ್ದು ಎರಡೂ ಕಡೆಯವರನ್ನು ಕರೆಯಿಸಿ ತೀರ್ಮಾನಿಸಿದ್ದರೂ ಬಹಿಷ್ಕಾರ ಹಾಕಿಲ್ಲವೆಂದು ಕಮಿಟಿಯವರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಆದರೆ ಗ್ರಾಮದಲ್ಲಿ ಆ ಬಹಿಷ್ಕಾರ ನಮ್ಮ ಕುಟುಂಬಕ್ಕೆ ಮುಂದುವರಿದಿದೆ ಎಂದು ಬಹಿಷ್ಕಾರಕ್ಕೊಳಗಾದ ನಾಲ್ವರೂ ದೂರಿದ್ದಾರೆ.
ಸಭೆಯಲ್ಲಿ ತಹಸೀಲ್ದಾರ್ ಪ್ರದೀಪ್ ನಿಕ್ಕಂ ಗ್ರಾಮ ಕಮಿಟಿಗೆ ದಂಡ ಹಾಕಲು ಅಧಿಕಾರವಿಲ್ಲ. ಗ್ರಾಮದ ಉಳಿವಿಗೆ ಕಮಿಟಿ ಅನಿವಾರ್ಯ. ಇದು ಮುಂದುವರಿದರೆ ದೂರುದಾರರು ಮತ್ತು ಆರೋಪಿಗಳಿಬ್ಬರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸಾಮಾಜಿಕ ಬಹಿಷ್ಕಾರ ಇನ್ನು ಮುಂದೆ ಕಂಡು ಬಂದಲ್ಲಿ ಜಿಲ್ಲಾಡಳಿತ ಸುಮ್ಮನೆ ಬಿಡುವುದಿಲ್ಲ. ಸೌಹಾರ್ದ ಮೂಡುವವರೆಗೆ ನಮ್ಮ ಅಧಿಕಾರಿಗಳು, ಸಿಬ್ಬಂದಿ ಗಮನಿಸುತ್ತಿರುತ್ತಾರೆ ಎಂದು ಸ್ಪಷ್ಟಪಡಿಸಿದರು.