ಸಾರಾಂಶ
ಧಾರವಾಡ:
ಸರ್ಕಾರದ ಯೋಜನೆಗಳ ಅನುಷ್ಠಾನ ಜವಾಬ್ದಾರಿ ಹೊತ್ತ ಇಲಾಖಾ ಅಧಿಕಾರಿಗಳು, ಯೋಜನೆಗಳ ಅನುಷ್ಠಾನದಲ್ಲಿ ಬದ್ಧತೆ ಹಾಗೂ ಕಾಳಜಿ ಹೊಂದಿರಬೇಕು ಎಂದು ಕರ್ನಾಟಕ ವಿಧಾನ ಮಂಡಳ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.ಇಲ್ಲಿಯ ಸೃಜನಾ ರಂಗ ಮಂದಿರದಲ್ಲಿ ಗುರುವಾರ ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮಾಜಿಕ ಅಸಮಾನತೆ ಸಮಾಜಕ್ಕೆ ಅಂಟಿದ ಪಿಡುಗು. ಇದನ್ನು ದೂರ ಮಾಡಿ ಎಸ್ಸಿ-ಎಸ್ಟಿ ಸಮುದಾಯವನ್ನು ಆರ್ಥಿಕವಾಗಿ ಮೇಲೆತ್ತಬೇಕು. ಸಾಮಾಜಿಕ ಅಸಮಾನತೆಯನ್ನು ಸಮತೋಲನ ಮಾಡಲು ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಮಾಡಬೇಕು. ದುರ್ಬಲ ವರ್ಗಕ್ಕೆ ಯಾವ ರೀತಿ ಯೋಜನೆ ನಿರ್ಮಿಸಿ ಮೇಲೆತ್ತಬೇಕು ಎಂಬುದನ್ನು ಅರಿತು ಸರ್ವ ಸಮಾನತೆಗಾಗಿ ಅಧಿಕಾರಿ ವರ್ಗ ಶ್ರಮಿಸಬೇಕು ಎಂದರು.ಇಲಾಖೆ ಅನುದಾನದಲ್ಲಿ ಶೇ. 24ರಷ್ಟು ಅನುದಾನವನ್ನು ಮೀಸಲಿಡುವ ಮೂಲಕ ಪರಿಶಿಷ್ಟ ಜಾತಿ ಹಾಗೂ ಸಮುದಾಯಗಳ ಜನಾಂಗಕ್ಕೆ ಬಳಕೆ ಮಾಡಬೇಕು. 2013ರಲ್ಲಿಯೇ ಎಸ್ಸಿ-ಎಸ್ಟಿಯವರಿಗೆ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಿದ್ದು ನಿರ್ದಿಷ್ಟಪಡಿಸಿದ ಇಲಾಖಾ ಅನುದಾನವನ್ನು ನಿಗದಿತ ವೇಳೆಯಲ್ಲಿಯೇ ವೆಚ್ಚ ಮಾಡಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಿನಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕಾಮಗಾರಿಗಳ ಅನುಷ್ಠಾನವನ್ನು ಜಂಟಿಯಾಗಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಗುಣಮಟ್ಟದ ಸಲಕರಣೆ ಬಳಸಲಾಗಿದೆಯೇ ಎಂಬುದನ್ನು ಸಹ ವರದಿಯಲ್ಲಿ ಉಲ್ಲೇಖಿಸಬೇಕು ಎಂದರು.ಎಸ್ಸಿ-ಎಸ್ಟಿ ಕಾಲನಿಯಿಂದ ನಿಗದಿತ ದೂರದಲ್ಲಿ ಮದ್ಯದ ಅಂಗಡಿ ಇರದಂತೆ ನಿಗಾ ವಹಿಸಿ ಮತ್ತು ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಪ್ಯಾಕೇಜ್ ಟೆಂಡರ್ ಸಿಸ್ಟಂ ಆಗದಂತೆ ಜಿಲ್ಲಾಡಳಿತ ನಿಗಾವಹಿಸಬೇಕು. ವಿವಿಧ ಕಾಮಗಾರಿಗಳನ್ನು ಒಂದೇ ಟೆಂಡರ್ನಲ್ಲಿ ಕರೆಯುವ ಮೂಲಕ ಎಸ್ಸಿ-ಎಸ್ಟಿ ಸಮುದಾಯಕ್ಕೆ ನೀಡಬೇಕಾದ ಟೆಂಡರ್ ಕೈ ತಪ್ಪುತ್ತಿವೆ. ಈ ಬಗ್ಗೆ ಜಾಗೃತೆ ವಹಿಸುವಂತೆ ಸೂಚಿಸಿದರು.
ಜಿಪಂ ಸಿಇಒ ಸ್ವರೂಪ ಟಿ.ಕೆ., ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಜಗದೀಶ ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಸದಸ್ಯರಾದ ಅಬ್ಬಯ್ಯ ಪ್ರಸಾದ, ಬಸವರಾಜ ಮತ್ತಿಮುಡ, ಬಿ. ದೇವೆಂದ್ರಪ್ಪ, ಕೆ.ಸಿ. ವೀರೇಂದ್ರ ಪಪ್ಪಿ, ಕೃಷ್ಣಾ ನಾಯ್ಕ ಕೆ., ಎನ್. ರವಿಕುಮಾರ, ದುರ್ಯೋಧನ ಐಹೊಳೆ, ಡಾ. ಎಂ ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ, ಜಿಲ್ಲಾದಿಕಾರಿ ದಿವ್ಯಪ್ರಭು ಸೇರಿದಂತೆ ಹಿರಿಯ ಅಧಿಕಾರಿಗಳಿದ್ದರು.