ಕನ್ನಡಪ್ರಭವಾರ್ತೆ ಶನಿವಾರಸಂತೆ

ಗೌಡಳ್ಳಿ ಗ್ರಾ.ಪಂ.ವ್ಯಾಪ್ತಿಯ ನಂದಿಗುಂದ ಜಂಕ್ಸನ್‌ನಲಿರುವ ಬಸ್ಸು ತಂಗುದಾಣ ಹಲವು ವರ್ಷಗಳಿಂದ ದುರಸ್ತಿ ಕಾಣದೆ ಸಮಸ್ಯೆಯಾಗಿದ್ದು, ಗ್ರಾಮದ ಸಮಾಜಸೇವಕ ರಾಜಣ್ಣ ಸ್ವಂತ ಖರ್ಚಿನಲ್ಲಿ ರಿಪೇರಿ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಈ ಬಸ್ಸು ತಂಗುದಾಣದ ಮೇಲ್ಛಾವಣಿ ಹೆಂಚುಗಳು ಸಂಪೂರ್ಣವಾಗಿ ಒಡೆದು ಹೋಗಿತ್ತು. ಹೀಗಾಗಿ ಗ್ರಾಮಸ್ಥರಿಗೆ ಮಳೆ ಬಿಸಿಲಿಗೆ ಆಸರೆಯಾಗಬೇಕಿದ್ದ ಬಸ್ಸು ತಂಗುದಾಣದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಸಮಸ್ಯೆ ಕುರಿತು ಗ್ರಾಮಸ್ಥರು ಸಂಬಂಧ ಪಟ್ಟ ಗ್ರಾ.ಪಂ., ಅಧಿಕಾರಿಗಳಿಗೆ ಬಸ್ಸು ತಂಗುದಾಣ ದುರಸ್ತಿಗೊಳಿಸುವಂತೆ ಹಲವಾರು ಬಾರಿ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿರಲಿಲ್ಲ . ಹೀಗಾಗಿ ಸಮಾಜಸೇವಕ ರಾಜಣ್ಣ ಬಸ್‌ ತಂಗುದಾಣ ದುರಸ್ತಿಗೆ ನಿರ್ಧರಿಸಿ ಹೊಸ ಹೆಂಚುಗಳನ್ನು ಅಳವಡಿಸಿದ್ದಾರೆ. ಬಸ್ಸು ತಂಗುದಾಣದ ಒಳಗಡೆ ಕಸಕಡ್ಡಿ ಸ್ವಚ್ಚಗೊಳಿಸಿ ಅಂದವಾಗಿಸಿದ್ದಾರೆ. ರಾಜಣ್ಣ ಅವರ ಕಾರ್ಯಕ್ಕೆ ರಾಮನಹಳ್ಳಿ ಗ್ರಾಮದ ಮಂಜು ಅವರು ಸಾಥ್ ನೀಡಿದ್ದಾರೆ. ಗ್ರಾಮಸ್ಥರಾದ ಗಿರೀಶ್ ಮತ್ತು ಉತ್ತಪ್ಪ ಅವರುಗಳು ಬೆಂಬಲವಾಗಿ ನಿಂತಿದ್ದಾರೆ.