ಸೌರ ವಿದ್ಯುತ್‌ ಸ್ಥಾವರ ಉದ್ಘಾಟಿಸಿದ ತರಳಬಾಳು ಶ್ರೀ

| Published : Feb 20 2024, 01:48 AM IST

ಸಾರಾಂಶ

ಪ್ರತಿನಿತ್ಯ ೧೪,೮೫೦ ಯುನಿಟ್‌ ಸೌರ ವಿದ್ಯುತ್‌ ಉತ್ಪಾದಿಸುವ ಗುರಿ, ವಾರ್ಷಿಕ 54 ಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದಿಸುವ ಸೌರ ವಿದ್ಯುತ್‌ ಸ್ಥಾವರ ಉದ್ಘಾಟನೆ

ಸಿರಿಗೆರೆ: 30 ಎಕರೆ ವಿಶಾಲವಾದ ಜಾಗದಲ್ಲಿ ಅತ್ಯಾಧುನಿಕ ಉಪಕರಣಗಳ ಅಳವಡಿಕೆಯೊಂದಿಗೆ ಸಮೀಪದ ಕ್ಯಾಸಾಪುರ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಸೌರ ವಿದ್ಯುತ್‌ ಸ್ಥಾವರವನ್ನು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ಕುಸುಮಶಿವ ಎಜರ್ಜಿ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಹಿಂದುಳಿದ ಜಿಲ್ಲೆಯ ಗ್ರಾಮಾಂತರ ಪ್ರದೇಶವೊಂದರಲ್ಲಿ ಇಂತಹ ಸಾಹಸಕ್ಕೆ ಮುಂದಾಗಿದ್ದನ್ನು ಸ್ಥಾವರ ಉದ್ಘಾಟಿಸಿದ ಶ್ರೀಗಳು ಶ್ಲಾಘಿಸಿದರು.

ನಿತ್ಯ ವಿದ್ಯುತ್‌ ಉತ್ಪಾದನೆ, ಪೂರೈಕೆ ಒಟ್ಟು ಪ್ರಮಾಣ, ರೈತರ ಕೃಷಿ ಚಟುವಟಿಕೆಗೆ ಸೋಲಾರ್‌ ಸ್ಥಾವರದಿಂದ ಉತ್ಪಾದನೆ ಅಗುವಂತಹ ವಿದ್ಯುತ್‌, ಸೋಲಾರ್ ಪ್ಲಾಂಟಿನ ವಿಸ್ತೀರ್ಣ, ವಿದ್ಯುತ್ ಮತ್ತು ಸೋಲಾರ್ ಪ್ಲಾಂಟಿನ ವೆಚ್ಚ ಮತ್ತು ಲಾಭ, ಪರಿಸರ ಪೂರಕ ವಿಚಾರಗಳ ಕುರಿತಂತೆ ಶ್ರೀಗಳು ತಂತ್ರಜ್ಞರ ಜೊತೆಗೆ ಚರ್ಚಿಸಿದರು.

ಪ್ರತಿನಿತ್ಯ ೧೪,೮೫೦ ಯುನಿಟ್‌ ಸೌರ ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ವಾರ್ಷಿಕ 54 ಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದಿಸುತ್ತೇವೆ ಎಂದು ಸಂಸ್ಥೆಯ ಮುಖ್ಯಸ್ಥ ನಿವೃತ್ತ ಐಎಎಸ್‌ ಅಧಿಕಾರಿ ಶಿವಕುಮಾರ್‌ ಶ್ರೀಗಳಿಗೆ ತಿಳಿಸಿದರು. ಸಂಸ್ಥೆಯ ನಿರ್ದೇಶಕಿ ಕುಸುಮಾಂಜಲಿ, ಸಂಸ್ಥೆಯ ಪದಾಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.