ಸೋಮಹಳ್ಳಿ ಡೇರಿ ಕಾಂಗ್ರೆಸ್‌ ತೆಕ್ಕೆಗೆ

| Published : Apr 02 2025, 01:04 AM IST

ಸಾರಾಂಶ

ತಾಲೂಕಿನ ಸೋಮಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ್ದು,ಬಿಜೆಪಿಗೆ ತೀವ್ರ ಮುಖಭಂಗ ಅನುಭವಿಸಿದೆ.

ಗುಂಡ್ಲುಪೇಟೆ: ತಾಲೂಕಿನ ಸೋಮಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ್ದು,ಬಿಜೆಪಿಗೆ ತೀವ್ರ ಮುಖಭಂಗ ಅನುಭವಿಸಿದೆ.

ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬೆಂಬಲಿತರಾದ ರತ್ನಮ್ಮ, ಮಂಗಳಮ್ಮ, ಸಿದ್ದಶೆಟ್ಟಿ, ಕೃಷ್ಣನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇನ್ನೂಳಿದ 7 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಎಸ್.ಜಿ. ಆನಂದಮೂರ್ತಿ, ನಾಗಪ್ಪ, ಎಸ್.ನಾಗರಾಜು, ಬಸವಣ್ಣ, ಮಹದೇವಪ್ಪ, ಎಸ್. ಮಹದೇವಪ್ಪ, ವಿ.ರವಿಕುಮಾರ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಸೋಮಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರೂ ಆದ ಚಾಮುಲ್‌ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್‌ ಅಭಿನಂದಿಸಿ ಮಾತನಾಡಿ ಶುಭ ಕೋರಿದರು.

ನೂತನ ನಿರ್ದೇಶಕರ ಆಯ್ಕೆಯನ್ನು ಚುನಾವಣಾಧಿಕಾರಿ ಪದ್ಮನಾಭ ಘೋಷಿಸುತ್ತಿದ್ದಂತೆಯೇ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಕಾಂಗ್ರೆಸ್‌ ಜೈಕಾರ ಹಾಕಿದರು.

ಬಿಜೆಪಿಗೆ ಮುಖಭಂಗ:

ಸಂಘಚ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಸ್ಪರ್ಧಿಸಿದ್ದ 7 ಕ್ಷೇತ್ರಗಳಲ್ಲಿಯೂ ಸೋಲು ಕಾಣುವ ಮೂಲಕ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

ಇತ್ತೀಚಗೆ ನಡೆದ ಸೋಮಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲೂ ಕಾಂಗ್ರೆಸ್‌ ಜಯಭೇರಿ ಬಾರಿಸಿತ್ತು.

ಈ ಸಮಯದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್.ಶಿವನಾಗಪ್ಪ, ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ಮಧುಶಂಕರ್‌, ಹಾಪ್‌ ಕಾಮ್ಸ್‌ ಮಾಜಿ ಅಧ್ಯಕ್ಷ ಎಸ್.ಎಂ.ಸದಾಶಿವಪ್ಪ, ಗೌಡಿಕೆ ಸದಾನಂದಮೂರ್ತಿ, ಸಂಘದ ಮಾಜಿ ಅಧ್ಯಕ್ಷ ಶಿವಪಾದಪ್ಪ, ಮುಖಂಡರಾದ ಎಚ್‌ಎನ್‌ಎಂ ರವಿ, ಪುಟ್ಟಸ್ವಾಮಿ ನಾಯಕ, ರವಿಕುಮಾರ್‌ ಸೇರಿದಂತೆ ಗ್ರಾಮದ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.