ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು ಕೃಷಿ ಚಟುವಟಿಕೆಗಳೂ ಗರಿಗೆದರಿವೆ. ಪೂರ್ವ ಮುಂಗಾರಿನಲ್ಲಿ ಒಟ್ಟಾರೆ 2 ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಕೃಷಿ ಇಲಾಖೆಯ ಪ್ರಕಾರ, ಪೂರ್ವ ಮುಂಗಾರಿನಲ್ಲಿ (ಮಾರ್ಚ್ 1 ರಿಂದ ಮೇ 31 ರವರೆಗೂ) ರಾಜ್ಯಾದ್ಯಂತ 2.86 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಆಗುವ ಅಂದಾಜಿತ್ತು. ಆದರೆ ಕಳೆದ ಹದಿನೈದಿಪ್ಪತ್ತು ದಿನಗಳಿಂದ ಮಳೆಯೂ ಚೆನ್ನಾಗಿ ಬರುತ್ತಿದ್ದು ರೈತರು ಬಿತ್ತನೆ ಪೂರ್ವ ಚಟುವಟಿಕೆಗಳನ್ನು ಕೈಗೊಂಡಿದ್ದು, 2 ಲಕ್ಷಕ್ಕೂ ಅಧಿಕ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ.
ಇದೀಗ ಮುಂಗಾರಿನ ಆಗಮನವೂ ಆಗಿರುವುದರಿಂದ ಪೂರ್ವ ಮುಂಗಾರಿನ ಗುರಿ ಮೀರಿ ಬಿತ್ತನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹೆಸರು, ಉದ್ದು, ಅಲಸಂದೆ, ತೊಗರಿ, ಎಳ್ಳು, ಶೇಂಗಾ ಮತ್ತಿತರ ಬೆಳೆಗಳನ್ನು ಈ ಅವಧಿಯಲ್ಲಿ ರೈತರು ಬೆಳೆಯುತ್ತಾರೆ. ಕೆಲ ಜಿಲ್ಲೆಗಳಲ್ಲಂತೂ ಒಳ್ಳೆಯ ಮಳೆ ಬಂದಿದ್ದು ಬಿತ್ತನೆ ಚುರುಕಾಗಿದೆ.
ತುಮಕೂರು, ಮಂಡ್ಯ, ಮೈಸೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಉತ್ತಮ ಬಿತ್ತನೆಯಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿತ್ತನೆ ಮುಂದಿನ ದಿನಗಳಲ್ಲಿ ಬಿರುಸಾಗಲಿದೆ.