ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 3 ತಿಂಗಳ ಟ್ಯೂಷನ್ ಕ್ಲಾಸ್ ತರಬೇತಿ ಆಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪಡೆಯಲು ಸಹಕಾರ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿ ಸಾಧನೆ ಮಾಡಲು ವಿಶೇಷ ತರಗತಿಗಳು ವರದಾನವಾಗಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಡಾ.ಯೋಗೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ವಿಠಲಾಪುರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಉಚಿತ ಟ್ಯೂಷನ್ ಕ್ಲಾಸ್ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶ್ರೀಕ್ಷೇತ್ರ ಯೋಜನೆಯ ಧರ್ಮದರ್ಶಿ ಡಾ.ವೀರೇಂದ್ರ ಹೆಗಡೆಯವರ ಚಿಂತನೆಯಿಂದ ಗ್ರಾಮೀಣ ಪ್ರದೇಶದ ಎಲ್ಲಾ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮ ಮಾಡುತ್ತಿದೆ ಎಂದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 3 ತಿಂಗಳ ಟ್ಯೂಷನ್ ಕ್ಲಾಸ್ ತರಬೇತಿ ಆಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪಡೆಯಲು ಸಹಕಾರ ನೀಡಲಾಗುತ್ತಿದೆ ಎಂದರು.

ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಒಂದು ತಿಂಗಳ ಕಾಲಾವಕಾಶವಿದೆ. ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಶಾಲೆಗೆ ಅನಗತ್ಯವಾಗಿ ಗೈರು ಹಾಜರಾಗಬಾರದು, ಪರೀಕ್ಷೆಗೆ ಹೆದರದೇ ಓದಬೇಕು ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್.ಟಿ.ಓ ಮಲ್ಲಿಕಾರ್ಜುನ್ ಮಾತನಾಡಿ, ಶ್ರೀಕ್ಷೇತ್ರದ ಯೋಜನೆ ಮೂಲಕ ಡಾ.ವೀರೇಂದ್ರ ಹೆಗ್ಗಡೆ ದಂಪತಿ ಕೈಗೊಂಡಿರುವ ಸಾಮಾಜಿಕ ಸೇವಾ ಯೋಜನೆಗಳನ್ನು ಶ್ಲಾಘಿಸಿದರು.

ಮುಖ್ಯ ಶಿಕ್ಷಕ ಶಂಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಪ್ರಸಾದ್, ಮೇಲ್ವಿಚಾರಕಿ ಗುಣಶ್ರೀ, ಶಾಲಾ ಶಿಕ್ಷಕ ಯೋಗೀಶ್, ಸೇವಾ ಪ್ರತಿನಿಧಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇಂದು ವಿದ್ಯುತ್ ಸರಬರಾಜು ಸ್ಥಗಿತ

ಮಳವಳ್ಳಿ: ನಗರ ಉಪವಿಭಾಗ ವ್ಯಾಪ್ತಿಯ ಕಾಗೇಪುರ ಶಾಖಾ ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಕಾಮಗಾರಿ ತ್ರೈ ಮಾಸಿಕ ನಿರ್ವಹಣೆ ಮತ್ತು ಮಾದರಿ ಗ್ರಾಮ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಫೆ.28 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ತಳಗವಾದಿ 66/11ಕೆವಿ ವಿವಿ ಉಪಕೇಂದ್ರದಿಂದ ಹೊರ ಹೋಗುವ ಎಫ್ 1 ಗಟ್ಟಿಕೊಪ್ಪಲು ಐಪಿ,ಎಫ್ 2 ಕೋರೇಗಾಲ, ಎನ್‌ಜೆವೈ, ಎಫ್ 3 ಮಾದಹಳ್ಳಿ ಐಪಿ, ದುಗ್ಗನಹಳ್ಳಿ, ತಳಗವಾದಿ ಐಪಿ ವಿದ್ಯುತ್ ಮಾರ್ಗಗಳಿಗೆ ವಿದ್ಯುತ್ ಅಡಚಣೆ ಉಂಟಾಗಲಿದೆ. ಗ್ರಾಹಕರು ಎಂದಿನಂತೆ ಸಹಕರಿಸಬೇಕೆಂದು ಸೆಸ್ಕ್ ಕಾರ್ಯನಿರ್ವಹಕ ಅಧಿಕಾರಿ ಪ್ರೇಮ್‌ಕುಮಾರ್ ತಿಳಿಸಿದ್ದಾರೆ.