ಜನಪದ ಪ್ರದರ್ಶನ ಕಲೆಗಳನ್ನು ಪರಿಚಯಿಸುವ ಹಾಗೂ ಮುಂದಿನ ಪೀಳಿಗೆಗೆ ಅವುಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಗುರುಕುಲದಲ್ಲಿ ವಿವಿಧ ಜನಪದ ಕಲಾಪ್ರಕಾರಗಳ ತರಬೇತಿ ನೀಡಲಾಗುತ್ತಿದೆ.

ಹುಬ್ಬಳ್ಳಿ:

ಹಳೆ ಹುಬ್ಬಳ್ಳಿಯ ಜಿಹೇಶ್ವರ ಕಲ್ಯಾಣ ಮಂಟಪದಲ್ಲಿ ಜಾನಪದ ನೆರಳು ಕಲೆ ಮತ್ತು ಸಾಂಸ್ಕೃತಿಕ ನಿರ್ವಹಣೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ “ಶರಣರ ಸಾಂಸ್ಕೃತಿಕ ಸಂಭ್ರಮ” ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.

ಈ ವೇಳೆ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ “ಯುವ ಜನಪದ ಸಿರಿ ಪ್ರಶಸ್ತಿ” ಪ್ರದಾನ ಮಾಡಲಾಯಿತು. ನೃತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಐಶ್ವರ್ಯ ಗೌಡರ್ ಹಾಗೂ ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಕೀರ್ತನ ಪೂಜಾರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ವೇಳೆ ಮಾತನಾಡಿದ ಜಾನಪದ ನೆರಳು ಸಂಶೋಧನಾ ಕೇಂದ್ರದ ಅಧ್ಯಕ್ಷ ಮತ್ತು ನೃತ್ಯ ಗುರುಕುಲದ ಗುರು ಸಾಲಿಯಾನ್ ಸಂತೋಷ್, ಜನಪದ ಪ್ರದರ್ಶನ ಕಲೆಗಳನ್ನು ಪರಿಚಯಿಸುವ ಹಾಗೂ ಮುಂದಿನ ಪೀಳಿಗೆಗೆ ಅವುಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಗುರುಕುಲದಲ್ಲಿ ವಿವಿಧ ಜನಪದ ಕಲಾಪ್ರಕಾರಗಳ ತರಬೇತಿ ನೀಡಲಾಗುತ್ತಿದೆ ಎಂದರು.

ಹಳೆ ಹುಬ್ಬಳ್ಳಿಯ ಮಕ್ಕಳಿಗೆ ಜನಪದ ಕಲಾಪ್ರಕಾರಗಳನ್ನು ಉಚಿತವಾಗಿ ಕಲಿಸುವ ಉದ್ದೇಶದಿಂದ ಚೌಕಿ ಮನೆ ನೃತ್ಯ ಗುರುಕುಲವನ್ನು ಪ್ರಾರಂಭಿಸಲಾಗಿದ್ದು, 70 ವಿದ್ಯಾರ್ಥಿನಿಯರಿಗೆ ಉಚಿತವಾಗಿ ಜನಪದ ಕಲಾಪ್ರಕಾರಗಳ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಜನಪದ ಕಲೆಗೆ ಉಚಿತ ತರಬೇತಿ ನೀಡುವ ಏಕೈಕ ಸಂಸ್ಥೆಯಾಗಿ ಚೌಕಿ ಮನೆ ನೃತ್ಯ ಗುರುಕುಲ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ದತ್ತಾತ್ರೇಯ ತಾಂಬೆ ಮಾತನಾಡಿ, ಜಾನಪದ ನೆರಳು ಸಂಶೋಧನಾ ಕೇಂದ್ರ ಹಾಗೂ ಗುರುಕುಲವು ಮಕ್ಕಳಿಗೆ ಉಚಿತವಾಗಿ ಜನಪದ ಕಲೆಯ ತರಬೇತಿ ನೀಡುವ ಮೂಲಕ ಅತ್ಯುತ್ತಮ ಸಮಾಜಮುಖಿ ಹಾಗೂ ಸಾಂಸ್ಕೃತಿಕ ಕಾರ್ಯ ಮಾಡುತ್ತಿದೆ. ಈ ಭಾಗದ ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ತರಬೇತಿ ಪಡೆಯಬೇಕು. ಗುರುಕುಲದ ಈ ಸಾಂಸ್ಕೃತಿಕ ಕಾರ್ಯಕ್ಕೆ ತಮ್ಮ ಸ್ವಕುಳಸಾಲಿ ಸಮಾಜದ ವತಿಯಿಂದ ಸದಾ ಪ್ರೋತ್ಸಾಹ ಮತ್ತು ಸಹಕಾರ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು, ವಿದ್ಯಾರ್ಥಿಗಳು, ಪೋಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಜನಪದ ಕಲೆ, ಸಂಸ್ಕೃತಿ ಮತ್ತು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮೂಲಕ “ಶರಣರ ಸಾಂಸ್ಕೃತಿಕ ಸಂಭ್ರಮ” ಕಾರ್ಯಕ್ರಮ ಗಮನ ಸೆಳೆಯಿತು.

ಕಾರ್ಯಕ್ರಮವನ್ನು ಸ್ವಾಕುಲಸಾಳಿ ಸಮಾಜದ ಹಿರಿಯ ಶಂಕರರಾವ್ ಸಫಾರೆ ಉದ್ಘಾಟಿಸಿದರು. ದತ್ತಾತ್ರೇಯ ತಾಂಬೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಖ್ಯಾತ ವಾದ್ಯ ಕಲಾವಿದ ಸ್ಟಿಫನ್ ಲುಂಜಲ್, ಸುಭಾಷ್ ಇದ್ದರು.

ದೀಪಿಕಾ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರೆ, ಪೂರ್ವಿ ಸ್ವಾಗತಿಸಿದರು. ಅಂಜಲಿ ಬಸವ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿ ದಳಬಂಜನ್ ವಂದನಾರ್ಪಣೆ ಸಲ್ಲಿಸಿದರು.