ಆಲೂರಿನ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ

| Published : Dec 26 2024, 01:01 AM IST

ಸಾರಾಂಶ

ಆಲೂರು ತಾಲೂಕಿನ ಪಾಳ್ಯ ಹೋಬಳಿ ಜೋಸೆಫ್ ನಗರದಲ್ಲಿರುವ ಸಂತ ಜೋಸೆಫರ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು. ಬಡವರ ಬಗ್ಗೆ ಕಾಳಜಿ ವಹಿಸಲು ಮತ್ತು ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ಜನರನ್ನು ಪ್ರೇರೇಪಿಸುವುದು ಹಾಗೂ ಜನರ ನಡುವೆ ಪ್ರೀತಿ, ಭ್ರಾತೃತ್ವ ಮೂಡಿಸುವ ಸಲುವಾಗಿ ಕುಟುಂಬ ಸಭೆಗಳನ್ನು ನಡೆಸುವುದು ವಿಶೇಷ. ವಿವಿಧೆಡೆ ಹಾಡುಗಾರಿಕೆಯ ಮೂಲಕ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಾರೆ, ನಾವು ಹುಟ್ಟುವ ಜಾಗ ನಮ್ಮ ಆಯ್ಕೆಯಾಗಿರುವುದಿಲ್ಲ ಆದರೆ ಯೇಸು ಸ್ವಾಮಿ ಅವರು ಹುಟ್ಟಿದ ಬಗ್ಗೆ ಶತಮಾನಗಳ ಮುಂಚೆಯೇ ದೇವರು ತಿಳಿಯಪಡಿಸಿದ್ದರು.

ಆಲೂರು: ಸಂತೋಷ, ಪ್ರೀತಿ, ಶಾಂತಿ ಮತ್ತು ಆಧ್ಯಾತ್ಮಿಕ ನವೀಕರಣದ ಋತುವೇ ಯೇಸುಕ್ರಿಸ್ತನ ಜನ್ಮದಿನ ಹಾಗೂ ಕ್ರಿಸ್‌ಮಸ್‌ ಆಚರಣೆ ಎಂದು ಜೋಸೆಫ್ ನಗರ ಚರ್ಚ್ ಧರ್ಮಗುರು ಆಲ್ವಿನ್ ಜೋಸೆಫ್ ಡಿಸೋಜ ತಿಳಿಸಿದರು.

ಆಲೂರು ತಾಲೂಕಿನ ಪಾಳ್ಯ ಹೋಬಳಿ ಜೋಸೆಫ್ ನಗರದಲ್ಲಿರುವ ಸಂತ ಜೋಸೆಫರ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿಸಿ ಮಾತನಾಡಿದ ಅವರು, ಕ್ರಿಸ್‌ಮಸ್‌ ಅನ್ನು ಈ ದಿನ ಜಗತ್ತು ಉತ್ಸಾಹದಿಂದ ಆಚರಿಸುತ್ತಿದೆ. ಡಿ.25 ಕ್ರಿಸ್‌ಮಸ್ ಸಂರಕ್ಷಕನಾದ ಯೇಸು ಕ್ರಿಸ್ತನ ಜನನವನ್ನು ಸೂಚಿಸುತ್ತದೆ. ಆದ್ದರಿಂದ ಡಿ.24ರ ಮಧ್ಯರಾತ್ರಿ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ಆಯೋಜಿಸಿ ಕ್ರಿಸ್‌ಮಸ್‌ ಕ್ಯಾರೋಲ್‌ಗಳ ಗಾಯನ ನಡೆದೆವು. ಬಡವರ ಬಗ್ಗೆ ಕಾಳಜಿ ವಹಿಸಲು ಮತ್ತು ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ಜನರನ್ನು ಪ್ರೇರೇಪಿಸುವುದು ಹಾಗೂ ಜನರ ನಡುವೆ ಪ್ರೀತಿ, ಭ್ರಾತೃತ್ವ ಮೂಡಿಸುವ ಸಲುವಾಗಿ ಕುಟುಂಬ ಸಭೆಗಳನ್ನು ನಡೆಸುವುದು ವಿಶೇಷ. ವಿವಿಧೆಡೆ ಹಾಡುಗಾರಿಕೆಯ ಮೂಲಕ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಾರೆ, ನಾವು ಹುಟ್ಟುವ ಜಾಗ ನಮ್ಮ ಆಯ್ಕೆಯಾಗಿರುವುದಿಲ್ಲ ಆದರೆ ಯೇಸು ಸ್ವಾಮಿ ಅವರು ಹುಟ್ಟಿದ ಬಗ್ಗೆ ಶತಮಾನಗಳ ಮುಂಚೆಯೇ ದೇವರು ತಿಳಿಯಪಡಿಸಿದ್ದರು. ಯೇಸು, ದೇವರಕುಮಾರ ಮಾತೇ ಮೇರಿಯ ಮುಖಾಂತರ ಮನುಷ್ಯನಾಗಿ ಜನಿಸಿ ಈ ಭೂಲೋಕಕ್ಕೆ ಬಂದರು. ಅವರು ಹುಟ್ಟಿ ಬಂದ ದಿನವನ್ನು ಕ್ರಿಸ್ಮಸ್ ಎಂದು ಕರೆಯುತ್ತಾರೆ. ಯೇಸು ಹುಟ್ಟಿದಾಗ ಆಕಾಶದಲ್ಲಿ ನಕ್ಷತ್ರ ಒಂದು ಕಾಣತೊಡಗಿತು, ಆ ನಕ್ಷತ್ರದ ಬೆಳಕಿನಲ್ಲಿ ಮೂಡಿದ ಮೂವರು ವಿದ್ವಾಂಸರು ಯೇಸು ಹುಟ್ಟಿದ ಸ್ಥಳಕ್ಕೆ ಬಂದು ಚಿನ್ನ (ರಾಜನ ಸಂಕೇತ )ಧೂಪ (ಯಾಜಕರ ಸಂಕೇತ )ಮತ್ತು ರಕ್ತ ಬೋಳ (ಯೇಸು ಪಡೆಯಲಿರುವ ಯಾತನೆಯ ಸಂಕೇತ) ಗಳನ್ನು ಅರ್ಪಿಸಿದರು ಆ ನಕ್ಷತ್ರದ ನೆನಪಿಗಾಗಿ ಕ್ರಿಸ್ಮಸ್ ಸಮಯದಲ್ಲಿ ಎಲ್ಲೆಡೆ ನಕ್ಷತ್ರಗಳ ಅಲಂಕಾರ ಕಾಣುತ್ತೇವೆ ಕೆಲವೇಡೆ ಇಡೀ ರಸ್ತೆ ಬೀದಿಗಳಲ್ಲೂ ನಕ್ಷತ್ರಗಳಿಂದ ಅಲಂಕರಿಸಲಾಗಿರುತ್ತದೆ.

ಬಲಿಪೂಜೆ ಈ ಹಬ್ಬದ ಬಹು ಮುಖ್ಯ ಆಚರಣೆಯಾಗಿದ್ದು, ಯೇಸು ಹುಟ್ಟಿದ್ದು ಮಧ್ಯರಾತ್ರಿ ಅದಕ್ಕಾಗಿ ಸಾಮಾನ್ಯವಾಗಿ ಮಧ್ಯರಾತ್ರಿಯಲ್ಲಿ ಹಬ್ಬದ ಬಲಿ ಪೂಜೆ ಅರ್ಪಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಉದ್ಯೋಗಕ್ಕಾಗಿ ಪರವೂರಿನಲ್ಲಿ ತಂಗಿರುವ ಕಾರಣ, ಮನೆಯಲ್ಲಿರುವ ಹಿರಿಯರು ಆದಷ್ಟು ಬೇಗ ಪೂಜೆಗೆ ಹೋಗಲು ಇಚ್ಛಿಸುತ್ತಾರೆ. ಬೆಳಗ್ಗೆ ಪೂಜೆಗೆ ಹೋಗಿ ಬರುತ್ತಾರೆ ಇದು ಇತರರಿಗೂ ಅನುಕೂಲವಾಗಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಮಧ್ಯರಾತ್ರಿಯ ಬಲಿ ಪೂಜೆಗಳು ನಿಂತು ಹೋಗಿರುವುದು ನಾವು ಗಮನಿಸಬಹುದು. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಈ ಸಂಪ್ರದಾಯ ಇನ್ನೂ ಜೀವಂತವಾಗಿದೆ. ವಿಶ್ವಾದ್ಯಂತ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದು ಯೇಸು ಸ್ವಾಮಿಯವರು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ ಎಂದು ತಿಳಿಸಿದರು.