ಶ್ರಾವಣ ಮಾಸದ ಕಡೆಯ ಸೋಮವಾರದ ಹಿನ್ನೆಲೆ ಜಿಲ್ಲಾದ್ಯಂತ ಭಕ್ತಿಭಾವ ಮೇಳೈಸಿದ್ದು, ಎಲ್ಲಾ ಶಿವಕ್ಷೇತ್ರಗಳು ಹಾಗೂ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು, ಅನ್ನಸಂತರ್ಪಣೆ ಅತ್ಯಂತ ಶ್ರದ್ಧೆಯಿಂದ ಜರುಗಿದವು.

ಮುಂಜಾನೆಯಿಂದಲೇ ದೇಗುಲಗಳಲ್ಲಿ ಭಕ್ತರ ದಂಡು । 10ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವೈಭವದ ರಥೋತ್ಸವಗಳು ಸಂಪನ್ನ

ಕನ್ನಡಪ್ರಭ ವಾರ್ತೆ ಗದಗ

ಶ್ರಾವಣ ಮಾಸದ ಕಡೆಯ ಸೋಮವಾರದ ಹಿನ್ನೆಲೆ ಜಿಲ್ಲಾದ್ಯಂತ ಭಕ್ತಿಭಾವ ಮೇಳೈಸಿದ್ದು, ಎಲ್ಲಾ ಶಿವಕ್ಷೇತ್ರಗಳು ಹಾಗೂ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು, ಅನ್ನಸಂತರ್ಪಣೆ ಅತ್ಯಂತ ಶ್ರದ್ಧೆಯಿಂದ ಜರುಗಿದವು. ಸಂಜೆಯಾಗುತ್ತಿದ್ದಂತೆ ಜಿಲ್ಲೆಯ ಏಳು ತಾಲೂಕುಗಳ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವೈಭವದ ರಥೋತ್ಸವಗಳು ಸಂಪನ್ನಗೊಂಡವು.

ಶ್ರಾವಣ ಮಾಸವು ಭಕ್ತಿ, ತಪಸ್ಸು ಮತ್ತು ಸಂಯಮದ ಪರ್ವಕಾಲ. ಅದರಲ್ಲೂ ಶ್ರಾವಣದ ಸೋಮವಾರಗಳು ಪರಮಶಿವನ ಆರಾಧನೆಗೆ ಅತ್ಯಂತ ಶ್ರೇಷ್ಠ. ಕೊನೆಯ ಸೋಮವಾರಕ್ಕೆ ವಿಶೇಷ ಧಾರ್ಮಿಕ ಮಹತ್ವವಿದ್ದು, ಮಾಸಪೂರ್ತಿ ಮಾಡಿದ ವ್ರತ, ನೇಮಗಳ ಸಿದ್ಧಿ ಈ ದಿನ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ. ಈ ಪುಣ್ಯದಿನದಂದು ಈಶ್ವರನಿಗೆ ಬಿಲ್ವಾರ್ಚನೆ, ಕ್ಷೀರಾಭಿಷೇಕ ಹಾಗೂ ರುದ್ರಾಭಿಷೇಕ ಮಾಡಿಸುವುದರಿಂದ ಕಷ್ಟಗಳು ದೂರವಾಗಿ, ಆಯುರಾರೋಗ್ಯ ಮತ್ತು ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ಅಚಲ ವಿಶ್ವಾಸ ಜನರಲ್ಲಿದೆ.ಎಲ್ಲೆಡೆಯೂ ಪೂಜೆ:

ಮುಂಜಾನೆಯಿಂದಲೇ ದೇಗುಲಗಳಲ್ಲಿ ಭಕ್ತರ ದಂಡು ಕಂಡುಬಂದಿತು, ಸಾರ್ವಜನಿಕರು ದೇವರ ದರ್ಶನ ಮತ್ತು ಪೂಜಾ ಕಾರ್ಯಗಳನ್ನು ನಡೆಸಿದರು. ಇನ್ನು ಗ್ರಾಮೀಣ ಭಾಗದಲ್ಲಿ ವಿಶೇಷ ಭಜನಾ ಕಾರ್ಯಕ್ರಮಗಳು ಕಳೆದೊಂದು ತಿಂಗಳಿಂದ ನಡೆದುಕೊಂಡು ಬಂದಿದ್ದು, ಬಹುತೇಕ ಭಜನಾ ಮಂಡಳಿಗಳು ಕಡೆಯ ಶ್ರಾವಣ ಸೋಮವಾರವಾದ ಹಿನ್ನೆಲೆ ತಮ್ಮ ಒಂದು ತಿಂಗಳ ಭಜನಾ ಕಾರ್ಯಕ್ರಮವನ್ನು ವಿಶೇಷ ಪೂಜೆಗಳು, ಭಜನಾ ಮೆರವಣಿಗೆಗಳನ್ನು ನಡೆಸಿ ಸಂಜೆಯ ವೇಳೆಗೆ ಸಂಪನ್ನಗೊಳಿಸಿದರು.ಶ್ರಾವಣ ಮಾಸವಿಡೀ ಆಚರಿಸಿದ ವ್ರತ, ಉಪವಾಸಗಳಿಗೆ ಕೊನೆಯ ಸೋಮವಾರ ಸಾಫಲ್ಯ ತಂದುಕೊಡುತ್ತದೆ. ಈ ದಿನ ಭಕ್ತಿಯಿಂದ ಈಶ್ವರನನ್ನು ಆರಾಧಿಸಿ ರಥೋತ್ಸವದಲ್ಲಿ ಪಾಲ್ಗೊಂಡರೆ ಇಡೀ ಕುಟುಂಬಕ್ಕೆ ಸುಖ, ಶಾಂತಿ ಲಭಿಸುತ್ತದೆ ಎಂಬ ನಂಬಿಕೆ ನಮ್ಮದು ಎನ್ನುತ್ತಾರೆ ಗದಗ ನಿವಾಸಿ ಸುಮಾ ಪಾಟೀಲ.

ಶ್ರಾವಣದ ಕಡೆಯ ಸೋಮವಾರ ಕೇವಲ ಪೂಜೆಯಷ್ಟೇ ಅಲ್ಲ, ಊರ ಸಮಸ್ತ ಜನರನ್ನು ಒಂದೆಡೆ ಸೇರಿಸುವ ಸಾಮರಸ್ಯದ ಹಬ್ಬ. ಸಾಮೂಹಿಕ ರಥೋತ್ಸವ ಮತ್ತು ದಾಸೋಹಗಳಲ್ಲಿ ಪಾಲ್ಗೊಳ್ಳುವುದು ಮನಸ್ಸಿಗೆ ಅಪಾರ ನೆಮ್ಮದಿ ಹಾಗೂ ಧಾರ್ಮಿಕ ಶಕ್ತಿ ನೀಡುತ್ತದೆ ಲಕ್ಕುಂಡಿ ಗ್ರಾಮದ ನಿವಾಸಿ ಮಹಾಂತೇಶ ಬದಾಮಿ.