ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಶ್ರೀ ಧವಲಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಧ್ಯಾತ್ಮಿಕ ಮತ್ತು ನೈತಿಕ ಶಿಬಿರ ಏರ್ಪಡಿಸಲಾಗಿತ್ತು.ಕಾಲೇಜಿನ ಹಳೆ ವಿದ್ಯಾರ್ಥಿ, ದ.ಕ. ಸಹಕಾರಿ ಬ್ಯಾಂಕ್ ನೌಕರರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಪೂಜಾರಿ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪಾರ್ಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಮುಖ್ಯ ಸಂಚಾಲಕಿ, ಅರ್ಥಶಾಸ್ತ್ರವಿಭಾಗ ಮುಖ್ಯಸ್ಥೆ ಡಾ. ರೂಪಾ, ಉಪ ಸಂಚಾಲಕಿ ಯಶೋದಾ, ವಿದ್ಯಾರ್ಥಿ ಸಂಘದ ನಾಯಕ ರಂಜಿತ್ ಉಪಸ್ಥಿತರಿದ್ದರು. ಪ್ರಜ್ಞಾಶ್ರೀ ನಿರೂಪಿಸಿದರು. ರಿತೀಶಾ ಶೆಟ್ಟಿ ವಂದಿಸಿದರು. ಇದೇ ವೇಳೆ ನಾಲ್ಕು ಗೋಷ್ಠಿಗಳು ಜರುಗಿದವು. ಪೂರ್ಣಪ್ರಜ್ಞಾ ಸಂಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮಾರ್ಪಳ್ಳಿ ಅವರು ‘ಭರವಸೆಯೇ ಬದುಕು ಮೌಲ್ಯಗಳೇ ಬೆಳಕು’, ಮಂಗಳೂರಿನ ಶಿಕ್ಷಣ ತಜ್ಞೆ, ಆಪ್ತ ಸಲಹೆಗಾರ್ತಿ ಹಾಗೂ ವಾಗ್ಮಿ ಡಾ. ಮಂಜುಳಾ ರಾವ್ ಅವರು ‘ಯುವಜನರ ಆಧ್ಯಾತ್ಮಿಕ ಶಿಕ್ಷಣ ಮತ್ತು ನೈತಿಕ ಮೌಲ್ಯಗಳು’, ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ವೆಂಕಟ್ರಮಣ ಭಟ್ ಕೆರೆಗದ್ದೆ ಅವರು ’ವಿದ್ಯಾರ್ಥಿ ಜೀವನದ ಆದರ್ಶಗಳು ಹಾಗೂ ಮಾತಿನ ಮಹತ್ವ’ ಹಾಗೂ ಪುತ್ತೂರಿನ ಆಧ್ಯಾತ್ಮಿಕ ವಿದ್ವಾಂಸ, ವಾಗ್ಮಿ ವೇದಮೂರ್ತಿ ಕೃಷ್ಣ ಉಪಾಧ್ಯಾಯ ಅವರು ‘ವಿದ್ಯಾರ್ಥಿ ಜೀವನದಲ್ಲಿ ಪ್ರಾರ್ಥನೆಯ ಮಹತ್ವ’ ವಿಷಯಗಳ ಕುರಿತು ಉಪನ್ಯಾಸ ನೀಡಿದರು.